● ಕರ್ನಾಟಕ ರಾಜ್ಯ ಆರ್ಥಿಕ ಸಮೀಕ್ಷೆ-2018-ಮುಖ್ಯಾಂಶಗಳು -Karnataka Economic Survey Notes


* ವಿಶಾಲ ಅರ್ಥ ವ್ಯವಸ್ಥೆಯಲ್ಲಿ ಪ್ರತಿಕೂಲ ಪರಿಸ್ಥಿತಿ ಇದ್ದಾಗ್ಯೂ ರಾಜ್ಯದ ವಿತ್ತೀಯ ಕೊರತೆಯು 2016-17(ಪ.ಅಂ) ರಲ್ಲಿ ಶೇ.2.16ರಷ್ಟು ರಾಜ್ಯಾದಾಯದ ಪ್ರತಿಶತದಿಂದ 2017-18 (ಆ.ಅಂ)ರಲ್ಲಿ ಶೇ.2.61 ರಷ್ಟು ರಾಜ್ಯಾದಾಯದ ಪ್ರತಿಶತಕ್ಕೆ ಸ್ವಲ್ಪ ಮಟ್ಟಿನ ಏರಿಕೆಯಾಯಿತು.
* ಹಾಗೆಯೇ ಬಂಡವಾಳ ಹಣ ಹೂಡಿಕೆಯು 2017-18(ಆ.ಅಂ) ರಲ್ಲಿ ರೂ.32033.04 ಕೋಟಿಗೆ ಏರಿಕೆಯಾಗಿದ್ದು, ಇದು ಇಡೀ ಸಾಲಗಳು ಬಂಡವಾಳ ಹಣ ಹೂಡಿಕೆಯಡಿಯಲ್ಲಿ ಹೂಡಿಕೆಯಾಗಿವೆ ಎಂದು ಸೂಚಿಸುತ್ತದೆ.
* ರಾಜ್ಯದ ರಾಜಸ್ವ ಜಮೆಯು 2017-18(ಆ.ಅಂ)ರಲ್ಲಿ ರೂ.144891.54 ಕೋಟಿಗಳಷ್ಟು ಹೆಚ್ಚಳವಾಗಿರುತ್ತದೆ.

=> ಆರ್ಥಿಕ ಕ್ರೋಢೀಕರಣ :
-> ರಾಜ್ಯ ಹಣಕಾಸು :
* ವೆಚ್ಚದಲ್ಲಿನ ಸುಧಾರಣಾ ಕ್ರಮಗಳ ಕುರಿತು ಸಲಹೆಗಳನ್ನು ನೀಡಲು ಕರ್ನಾಟಕ ಸರ್ಕಾರವು ರಚಿಸಿದ ವೆಚ್ಚ ಸುಧಾರಣಾ ಆಯೋಗವು - ಬಂಡವಾಳ ಅನುದಾನವನ್ನು - ರಾಜಸ್ವದ ಪ್ರತಿಕೂಲತೆ\ಅನಾನುಕೂಲತೆ (Revenue Adversity)ಗಳಿಂದ ಬೇರ್ಪಡಿಸುವುದು ಅವಶ್ಯವೆಂದು ಸಲಹೆ ಮಾಡಿದೆ.

-> ರಾಜಸ್ವ ಜಮೆಗಳು ಹಾಗೂ ಸಂಯೋಜನೆ:  
* ರಾಜ್ಯದ ಸ್ವಂತ ರಾಜಸ್ವವು 2017-18 (ಆ.ಅಂ)  ರಲ್ಲಿ ಶೇ.7.03 ಕ್ಕೆ ಇಳಿಕೆಯಾಗಿದೆ.
* ಕೇಂದ್ರದ ತೆರಿಗೆಯ ಪಾಲು 2017-18 (ಆ.ಅಂ)  ರಲ್ಲಿ ಶೇ.2.49 ಕ್ಕೆ ಏರಿಕೆಯಾಗಿರುತ್ತದೆ.
* ಕೇಂದ್ರ ಸರ್ಕಾರದ ಅನುದಾನದಲ್ಲಿ ರಾಜ್ಯಾದಾಯದ ಪಾಲು ಶೇ.1.49 ರಿಂದ ಶೇ.1.26 ಕ್ಕೆ ಕಡಿಮೆಯಾಗಿದೆ. ಆದಾಗ್ಯೂ ಇವುಗಳ ಅನುಪಾತವು 2017-18 (ಆ.ಅಂ)  ರಲ್ಲಿ ಕುಸಿದಿರುವ ಪ್ರವೃತ್ತಿಗಳನ್ನು ತೋರಿಸುತ್ತದೆ.

-> ಸಾಲಗಳು :
ರಾಜ್ಯ ಸರ್ಕಾರದ ಸಂಚಿತ ಸಾಲಗಳು 13ನೇ ಹಣಕಾಸು ಆಯೋಗವು ನಿಗಧಿಪಡಿಸಿರುವ - ಶೇ.25 ರ ಪರಿಮಿತಿಯಲ್ಲಿಯೇ ಇವೆ.

=> 2017-18(ಆ.ಅಂ)  ನೇ ಸಾಲಿನ ಆಯವ್ಯಯದಲ್ಲಿನ ಬೆಳವಣಿಗೆಗಳು:  
-> ಮುಖ್ಯಾಂಶಗಳು :
* ಹಿಂದಿನ ವರ್ಷಕ್ಕೆ ಹೋಲಿಸಿದರೆ 2017-18 (ಆ.ಅಂ)  ರ ವೆಚ್ಚವು ಶೇ.13.28 ಪ್ರತಿಶತ ಹೆಚ್ಚಾಗಬಹುದೆಂದು ನಿರೀಕ್ಷಿಸಲಾಗಿದೆ.
* ಬಂಡವಾಳ ವೆಚ್ಚವು ರಾಜಸ್ವ ವೆಚ್ಚದ ಬೆಳವಣಿಗೆಯ ದರಕ್ಕಿಂತ ವೇಗವಾಗಿ ಹೆಚ್ಚುತ್ತಿದ್ದಾಗ್ಯೂ, ರಾಜ್ಯವು ತನ್ನ ಸಮಗ್ರ ರಾಜಸ್ವ ಹೆಚ್ಚುವರಿಯನ್ನು ಸಮರ್ಪಕವಾಗಿ ನಿರ್ವಹಿಸಿಕೊಂಡು ಬಂದಿದೆ.
* ವೆಚ್ಚಕ್ಕೆ ಸಂಬಂಧಿಸಿದಂತೆ ಗಮನಿಸಬೇಕಾದ ಸ್ವಾರಸ್ಯದ ವಿಷಯವೇನೆಂದರೆ - ಅಭಿವೃದ್ಧಿ ವೆಚ್ಚದಲ್ಲಿ ತಲಾವಾರು ಪ್ರಮಾಣ ಹೆಚ್ಚಳವಾಗಿರುತ್ತದೆ. ಇದರಿಂದ ಕರ್ನಾಟಕದ ಪ್ರತಿಯೊಬ್ಬ ನಾಗರಿಕನಿಗೆ ಹಣಕಾಸು ಹಂಚಿಕೆ ಹೆಚ್ಚಾಗಿರುವುದು ಕಂಡುಬರುತ್ತದೆ.

=> ಜಮೆಗಳು :
ಟಿಪ್ಪಣಿ: 1. ಭಾರತೀಯ ರಿಸರ್ವ್ ಬ್ಯಾಂಕ್  ಸಾಧನ ಮತ್ತು ಮಾರ್ಗೋಪಾಯ ಮುಂಗಡವನ್ನು -> ಬಂಡವಾಳ ಜಮೆ ಮತ್ತು ವೆಚ್ಚದಲ್ಲಿ ಸೇರಿಸಿರುವುದಿಲ್ಲ.
2. ಬಂಡವಾಳ ಜಮೆಯು -> ಆರ್ಥಿಕಸ್ಮಿಕ ನಿಧಿ(ನಿವ್ವಳ)  ಮತ್ತು ಸಾರ್ವಜನಿಕ ಖಾತೆ(ನಿವ್ವಳ)ಯನ್ನು ಒಳಗೊಂಡಿರುತ್ತದೆ.

=> ರಾಜಸ್ವ ಜಮೆಗಳು :
ರಾಜಸ್ವ ಜಮೆಗಳು ನಾಲ್ಕು ಪ್ರಮುಖ ಅಂಶಗಳನ್ನು ಹೊಂದಿರುತ್ತದೆ. ಅವುಗಳೆಂದರೆ,
1)  ಸ್ವಂತ ತೆರಿಗೆ ರಾಜಸ್ವಗಳು,
2) ತೆರಿಗೆಯೇತರ ರಾಜಸ್ವಗಳು,
3) ಕೇಂದ್ರ ಸರ್ಕಾರದಿಂದ ಹಸ್ತಾಂತರವಾದ ಸಂಪನ್ಮೂಲಗಳು ಹಾಗೂ
4) ಸಹಾಯಾನುದಾನ ಮತ್ತು ವಂತಿಕೆಗಳು. 2017-18 (ಆ.ಅಂ) ರಲ್ಲಿ ರಾಜ್ಯದ ಸ್ವಂತ ತೆರಿಗೆ ರಾಜಸ್ವವು ಶೇ.9.42 ರಷ್ಟು ಮತ್ತು ತೆರಿಗೆಯೇತರ ರಾಜ್ವ, ಕೇಂದ್ರದ ಅನುದಾನ ಸೇರಿ ಶೇ.5.16 ರಷ್ಟು ಏರಿಕೆಯಾಗಬಹುದೆಂದು ನಿರೀಕ್ಷಿಸಲಾಗಿದೆ. 2017-18 (ಆ.ಅಂ)  ನೇ ಸಾಲಿನಲ್ಲಿ ಒಟ್ಟು ರಾಜಸ್ವ ಜಮೆಯಲ್ಲಿ ರಾಜ್ಯದ ತೆರಿಗೆ ಆದಾಯವು ಶೇ.84.11 ರಷ್ಟಿದೆ.

=>  ತೆರಿಗೆ ರಾಜಸ್ವ :
* ತೆರಿಗೆ ರಾಜಸ್ವದ ಆದಾಯವು ಪ್ರಮುಖವಾಗಿ ಆದಾಯ ಮತ್ತು ವೆಚ್ಚದ ಮೇಲಿನ ತೆರಿಗೆ, ಪ್ರವೇಶ ತೆರಿಗೆ, ಆಸ್ತಿ ಮೇಲಿನ ತೆರಿಗೆ, ಬಂಡವಾಳ ವಹಿವಾಟಿನ ತೆರಿಗೆ, ಸರಕು ಮತ್ತು ಸೇವೆಗಳ ಮಾರಾಟ ತೆರಿಗೆ / ವ್ಯಾಟ್, ರಾಜ್ಯ ಅಬಕಾರಿ ತೆರಿಗೆ, ವಾಹನಗಳ ಮೇಲಿನ ತೆರಿಗೆ ಮತ್ತು ಕೇಂದ್ರ ತೆರಿಗೆಗಳಲ್ಲಿನ ರಾಜ್ಯದ ಪಾಲನ್ನು ಒಳಗೊಂಡಿರುತ್ತದೆ.
* ರಾಜ್ಯದ ಸ್ವಂತ ತೆರಿಗೆ ಆದಾಯದಲ್ಲಿ ಮಾರಾಟ ತೆರಿಗೆಯ / ವ್ಯಾಟ್ ಮುಖ್ಯ ಮೂಲವಾಗಿದ್ದು, 2017-18 (ಆ.ಅಂ)  ರಲ್ಲಿ ಶೇ.15.35 ರ ಬೆಳವಣಿಗೆ ದರದೊಂದಿಗೆ ಇದರ ಪಾಲು ಶೇ.58.47 ರಷ್ಟಾಗಿರುತ್ತದೆ.

=>  ತೆರಿಗೆಯೇತರ ರಾಜಸ್ವ :
* ತೆರಿಗೆಯೇತರ ರಾಜಸ್ವವು, ಸಾಮಾಜಿಕ, ಆರ್ಥಿಕ ಮತ್ತು ಸಾಮಾನ್ಯ ಸೇವೆಗಳ ಬಡ್ಡಿ ಮತ್ತು ಡಿವಿಡೆಂಡ್ಗಳ ಜಮೆಗಳನ್ನು ಒಳಗೊಂಡಿರುತ್ತದೆ.
* ಒಟ್ಟು ಜಮೆಗೆ ತೆರಿಗೆಯೇತರ ಆದಾಯದ ಪ್ರಮಾಣ ವರ್ಷದಿಂದ ವರ್ಷಕ್ಕೆ ಸತತವಾಗಿ ತುಂಬಾ ಕಡಿಮೆಯಾಗುತ್ತಿದೆ. ರಾಜ್ಯದ ತೆರಿಗೆಯೇತರ ವರಮಾನವನ್ನು ರಾಜ್ಯಾದಾಯದ ಪ್ರಮಾಣಕ್ಕೆ ಹೋಲಿಸಿದಾಗ ದೇಶದಲ್ಲಿಯೇ ಇದು ಅತ್ಯಂತ ಕಡಿಮೆಯಾಗಿರುವುದು ಕಂಡು ಬರುತ್ತಿದೆ. ಇದು ಕಳೆದ 5-6 ವರ್ಷಗಳಿಂದ ಶೇ. 1% ರ ಸುತ್ತ ಸುಳಿದಾಡುತ್ತಿದೆ. ಇದಕ್ಕೆ ವೆಚ್ಚಗಳ ಸಂಗ್ರಹಣೆ ಕಡಿಮೆಯಾಗಿರುವುದೆ ಕಾರಣವಾಗಿದೆ.

=> ಬಂಡವಾಳ ಜಮೆಗಳು :
* ಭಾರತ ಸರ್ಕಾರದಿಂದ ಸಾಲಗಳು, ರಾಜ್ಯ ಆಂತರಿಕ ಸಾಲಗಳು-ಮಾರ್ಗೋಪಾಯಗಳು, ಮಾರುಕಟ್ಟೆ ಸಾಲ (ನಿವ್ವಳ) , ಸಾರ್ವಜನಿಕ ಖಾತೆಗಳ ಸಾಲ, ಮುಂಗಡಗಳ ವಸೂಲಿ ಮತ್ತು ಆರ್ಥಿಕಸ್ಮಿಕ ನಿಧಿ ಮುಂತಾದವುಗಳನ್ನೊಳಗೊಂಡಿರುತ್ತವೆ.

=> ವೆಚ್ಚಗಳು:  
13 ನೇ ಸಾಲಿನಲ್ಲಿ ಸಂಚಿತ ಸಾಲವು ರಾಜ್ಯಾದಾಯ (GSDP) ದ ಪ್ರತಿಶತ ಶೇ.22.34 ರಿಂದ 2017-18 (ಆ.ಅಂ) ನೇ ಸಾಲಿಗೆ ಶೇ.17.90 ರಷ್ಟು ಗಮರ್ನಾಹವಾಗಿ ಇಳಿಕೆಯಾಗಿರುತ್ತದೆ. ಹಾಗೂ ಇದೇ ಅವಧಿಯಲ್ಲಿ ಬಡ್ಡಿ ಮರುಪಾವತಿಯು ಸಹ ಶೇ.1.31 ರಿಂದ 1.11 ಕ್ಕೆ ಇಳಿಕೆಯಾಗಿರುವುದು ಕಂಡು ಬರುತ್ತದೆ.

-> ವೆಚ್ಚದ ಕಾರ್ಯಕಾರಿ ವರ್ಗೀಕರಣ :
ಸರ್ಕಾರವು ಅರ್ಥಪೂರ್ಣವಾಗಿ 3 ವಿಧವಾದ ಸೇವೆಗಳನ್ನು ಒದಗಿಸುತ್ತದೆ, ಅವುಗಳೆಂದರೆ - 1) ಸಾಮಾನ್ಯ 2) ಸಾಮಾಜಿಕ ಹಾಗೂ ಸಮುದಾಯಿಕ ಮತ್ತು 3)  ಆರ್ಥಿಕ ಸೇವೆಗಳು. 
ರಾಜ್ಯವು ತಾನು ನಿರ್ವಹಿಸುವ ವಿವಿಧ ಕಾರ್ಯಗಳಿಂದ ಸರ್ಕಾರದ ಆದ್ಯತೆಗಳು ತಿಳಿಯಲ್ಪಡುತ್ತವೆ. ಮಾನವ ಅಭಿವೃದ್ಧಿ, ಮೂಲ ಸೌಕರ್ಯ ಅಭಿವೃದ್ಧಿಗೆ, ಸಾಮಾಜಿಕ, ಆರ್ಥಿಕ ಮತ್ತು ಸಾಮಾನ್ಯ ಸೇವೆಗಳ ಕ್ಷೇತ್ರಗಳಲ್ಲಿ ಆಗಿರುವ ಹೆಚ್ಚು ವೆಚ್ಚವು ಸ್ವಾಗತಾರ್ಹ ಬೆಳವಣಿಗೆಯಾಗಿದೆ.

-> ಅಭಿವೃದ್ಧಿ ವೆಚ್ಚ :  
* ಅಂತರ್ ರಾಜ್ಯ ಹೋಲಿಕೆ ರಾಜ್ಯದ ತಲಾ ಅಭಿವೃದ್ಧಿ ವೆಚ್ಚವು ಇತರೆ ರಾಜ್ಯಗಳ ಹಾಗೂ ದೇಶದ ಸರಾಸರಿ ತಲಾ ಅಭಿವೃದ್ಧಿ ವೆಚ್ಚಕ್ಕಿಂತ ಹೆಚ್ಚಾಗಿರುವುದು ಸ್ಪಷ್ಟವಾಗಿ ಕಾಣುತ್ತದೆ. ಅಭಿವೃದ್ಧಿ ವೆಚ್ಚದಲ್ಲಿ ಸರ್ಕಾರದ ಕಾರ್ಯಕ್ರಮಗಳಾದ ಸಾಮಾಜಿಕ ಹಾಗೂ ಆರ್ಥಿಕ ಸೇವೆಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ವೆಚ್ಚಮಾಡಿರುವುದು ಸೇರಿರುತ್ತದೆ, ಈ ವೆಚ್ಚವು ರಾಜ್ಯದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ನೀಡಿದ ಕೊಡುಗೆಯಾಗಿರುತ್ತದೆ. ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕ ರಾಜ್ಯವು ಹೆಚ್ಚು ತಲಾವಾರು ಅಭಿವೃದ್ಧಿ ವೆಚ್ಚ ಹೊಂದಿರುವ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ.

=> 2017-18ರ ವೆಚ್ಚದ ಪ್ರಮುಖಾಂಶಗಳು:  
ಟಿಪ್ಪಣಿ :  ತಲಾವಾರು ಅಭಿವೃದ್ಧಿ ವೆಚ್ಚವನ್ನು 2014, 2015 ಮತ್ತು 2016 ರ ಪ್ರೊಜೆಕ್ಟೆಡ್ ಜನಸಂಖ್ಯೆ ಆಧಾರದ ಮೇಲೆ ಲೆಕ್ಕ ಹಾಕಲಾಗಿದೆ.
ಟಿಪ್ಪಣಿ :  ತಲಾವಾರು ವೆಚ್ಚಗಳು 2015, 2016 ಮತ್ತು 2017ರ ಪ್ರೊಜೆಕ್ಟಡ್ ಜನಸಂಖ್ಯೆಯ ಆಧಾರವನ್ನು ಹೊಂದಿದೆ.
* ಅಭಿವೃಧ್ಧಿ ವೆಚ್ಚದಲ್ಲಿನ ಸಂಖ್ಯೆಗಳು ಒಟ್ಟು ಅಭಿವೃದ್ಧಿ ವೆಚ್ಚದಲ್ಲಿನ ಶೇಕಡವಾರು ವೆಚ್ಚವನ್ನು ಹಾಗೂ ಅಭಿವೃಧ್ಧಿಯೇತರ ವೆಚ್ಚದಲ್ಲಿನ ಸಂಖ್ಯೆಗಳು ಒಟ್ಟು ಅಭಿವೃದ್ಧಿಯೇತರ ವೆಚ್ಚದಲ್ಲಿನ ಶೇಕಡವಾರು ವೆಚ್ಚವನ್ನು ಸೂಚಿಸುತ್ತವೆ. ಒಟ್ಟಾರೆ ವೆಚ್ಚದಲ್ಲಿ ಅಭಿವೃದ್ಧಿ ವೆಚ್ಚದ ಪಾಲು ಶೇ.12.89 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.
* ಆರ್ಥಿಕ ಸೇವೆಗಳ ಪಾಲಿನಲ್ಲಿ ನೀರಾವರಿ ಮತ್ತು ಇಂಧನ ವಲಯದ ನಂತರ ಕೃಷಿ ಮತ್ತು ಸಂಬಂಧಿಸಿದ ವಲಯಗಳ ಪಾಲು ಹೆಚ್ಚಾಗಿರುವುದು ಕಂಡು ಬರುತ್ತದೆ. ಹಾಗೆಯೇ ಸಾಮಾಜಿಕ ಸೇವೆಯಲ್ಲಿ ಶಿಕ್ಷಣ ವಲಯದ ನಂತರ ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ವಲಯಗಳು ಪ್ರಮುಖ ಪಾಲನ್ನು ಪಡೆದುಕೊಂಡಿರುತ್ತದೆ.

=> ಯೋಜನೆ ಮತ್ತು ಯೋಜನೇತರ ವೆಚ್ಚ :
* 2016-17(ಪ.ಅಂ)ನೇ ಸಾಲಿಗೆ ರಾಜ್ಯದ ಒಟ್ಟಾರೆ ವೆಚ್ಚ (ಯೋಜನೆ+ಯೋಜನೇತರ) ರೂ.172025.20 ಕೋಟಿಗಳಷ್ಟಾಗುವುದೆಂದು ಅಂದಾಜು ಮಾಡಲಾಗಿದೆ.
* 2016-17(ಪ.ಅಂ)ನೇ ಕೇಂದ್ರ ಯೋಜನಾ ಅನುದಾನವನ್ನು 2016-17 (ಆ.ಅಂ)  ನೇ ಸಾಲಿಗೆ ಹೋಲಿಸಿದರೆ ರೂ.3.42 ಕೋಟಿಗಳಷ್ಟು ಇಳಿಕೆಯಾಗಿರುತ್ತದೆ. ಇದಕ್ಕೆ ಕಾರಣವೆನೆಂದರೆ ಎಲ್ಲಾ ಕೇಂದ್ರ ಪುರಸ್ಕೃತ ಹಾಗೂ ಕೇಂದ್ರವಲಯದ ಕಾರ್ಯಕ್ರಮಗಳು ಕೇಂದ್ರದ ಅನುದಾನದಡಿ ರಾಜ್ಯ ಯೋಜನೆಗೆ ವರ್ಗಾವಣೆಗೊಂಡಿರುವುದು.
* 2017-18 ರ ನಂತರ ಯೋಜನೆ ಹಾಗೂ ಯೋಜನೇತರ ವಿಭಾಗೀಕರಣವನ್ನು ತೆಗೆದು ಹಾಕಲಾಗಿದೆ.
* ತಾಜಾ ಕಾರ್ಯಕ್ರಮಗಳ ಮತ್ತು ಹಿಂದಿನ ಚಟುವಟಿಕೆಗಳ ನಡುವಿನ ವೆಚ್ಚದ ವಿತರಣೆಯ ಬಗ್ಗೆ ಅರ್ಥಮಾಡಿಕೊಳ್ಳಲು ಇಗಿರುವ ಜೋಡಣೆಯು ಸಹಾಯ ಮಾಡುತ್ತದೆ.
* ಸರ್ಕಾರವು ಕಾಲಕಾಲಕ್ಕೆ ಕಠಿಣ ಕ್ರಮಗಳನ್ನು ತೆಗೆದುಕೊಂಡಲ್ಲಿ ಅಂದರೆ - ಹೊಸ ನೇಮಕಾತಿಯನ್ನು ತಡೆಯುವುದು, ವಾಹನಗಳನ್ನು ಖರೀದಿಸುವುದು, ವಿದೇಶಿ ಪ್ರವಾಸ ಹಾಗೂ ತರಬೇತಿ, ದೊಡ್ಡ ಸ್ಟಾರ್ ಹೋಟಲ್ ಗಳಲ್ಲಿ ಸರ್ಕಾರದ ಕಾಯಕ್ರಮ ನಡೆಸುವುದನ್ನು ತಡೆಯುವುದು ಹಾಗೂ ವಾಣಿಜ್ಯ ದರ್ಜೆಯಲ್ಲಿ ವಿಮಾನಯಾನವನ್ನು ನಿಷೇಧಿಸುವುದರಿಂದ ಯೋಜನೇತರ ವೆಚ್ಚವನ್ನು ಕಡಿಮೆ ಮಾಡಬಹುದಾಗಿದೆ.

=> ಬದ್ಧತಾ ವೆಚ್ಚ :
* 2016-17(ಪ.ಅಂ)  ರಲ್ಲಿ ಬದ್ದತಾ ವೆಚ್ಚಗಳಾದ - ಸಂಬಳ, ಪಿಂಚಣಿ, ಬಡ್ಡಿ, ಸಹಾಯಧನ, ಆಡಳಿತಾತ್ಮಕ ವೆಚ್ಚಗಳು, ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ವರ್ಗಾವಣೆ ಇವುಗಳಿಗೆ ಶೇ.78 ಪ್ರತಿಶತ ಬದ್ಧತೇತರ ರಾಜಸ್ವ ಸ್ವೀಕೃತಿಗಳಿಂದ (ಒಟ್ಟು ರಾಜ್ಯಸ್ವ ಸ್ವೀಕೃತಿಯಲ್ಲಿ ಭಾರತ ಸರ್ಕಾರದ ಅನುದಾನವನ್ನು ಹೊರತುಪಡಿಸಿ)  ಪೂರೈಸಲಾಗುತ್ತವೆ.

=> ವೆಚ್ಚದ ಆರ್ಥಿಕ ವರ್ಗೀಕರಣ :
* ಕೇಂದ್ರದ ಸಾಂಖ್ಯಿಕ ಸಂಸ್ಥೆಯ ಮಾರ್ಗದರ್ಶನದಲ್ಲಿ ಖರಾಜ್ಯದ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯಖವು ರಾಜ್ಯದ ಆಯವ್ಯಯದಲ್ಲಿ ಆರ್ಥಿಕ ಉಪಯುಕ್ತತೆ ಅಡಿಯಲ್ಲಿ ಸರ್ಕಾರದ ವೆಚ್ಚದ ವರ್ಗೀಕರಣವನ್ನು ಮಾಡುತ್ತದೆ. ಈ ವರ್ಗೀಕರಣವು ರಾಜ್ಯ ಸರ್ಕಾರದ ಆಯವ್ಯಯದ ವ್ಯವಹಾರದ ಆರ್ಥಿಕ ಉಪಯುಕ್ತತೆಯನ್ನು ವಿಶ್ಲೇಷಿಸಲು ಉಪಯೋಗವಾಗುತ್ತದೆ.
* ಚಾಲ್ತಿ ವರ್ಷದ ಒಟ್ಟು ವೆಚ್ಚದಲ್ಲಿ ಅನುಭೋಗ ವೆಚ್ಚದ ಪ್ರಮಾಣ-> ಶೇ.27.73ರಷ್ಟನ್ನು ಒಳಗೊಂಡಿರುತ್ತದೆ.

=> ಸರ್ಕಾರದ ಬಂಡವಾಳ ಸೃಜನೆ :
2017-18(ಆ.ಅಂ)  ರಲ್ಲಿ ಸರ್ಕಾರದ ಒಟ್ಟಾರೆ ಬಂಡವಾಳ ಸೃಜನೆಯು ಶೇ.9.18ರಷ್ಟು ಏರಿಕೆಯಾಗಬಹುದೆಂದು ನಿರೀಕ್ಷಿಸಲಾಗಿದೆ.

=>  ಹನ್ನೆರಡನೆ ಪಂಚವಾರ್ಷಿಕ ಯೋಜನೆಯ ಸಂಪನ್ಮೂಲಗಳು (2012-17)  :
* ಹನ್ನೆರಡನೆಯ ಪಂಚವಾರ್ಷಿಕ ಯೋಜನೆಯ ಆಯವ್ಯಯ ಮೊಬಲಗು ರೂ.255250.00 ಕೋಟಿಗಳಾಗಿದ್ದು ಇದರಲ್ಲಿ  ರಾಜ್ಯ (ನಿವ್ವಳ) ಸಾಲ- 40%,  ರಾಜ್ಯ ಒಡೆತನದ ಸಂಪನ್ಮೂಲಗಳು- 36%, ಐ.ಇ.ಬಿ.ರ್- 13% ಹಾಗೂ ರಾಜ್ಯ ಯೋಜನೆಗೆ ಕೇಂದ್ರ ಸರ್ಕಾರದ ಅನುದಾನ-ಉಳಿದ 11% ಶೇಕಡವಾರು ಬಳಕೆಯಲ್ಲಿ ರಾಜ್ಯ ಸಾಲದ (ನಿವ್ವಳ)  ಪಾಲು ಅತೀ ಹೆಚ್ಚು ಅಂದರೆ 144.34%, ಕೇಂದ್ರ ಸರ್ಕಾರದ ಸಹಾಯ 113.98%, ಐ.ಇ.ಬಿ.ರ್ 112.00% ಹಾಗೂ ರಾಜ್ಯ ಒಡೆತನದ ಸಂಪನ್ಮೂಲಗಳು 99.21% ರಷ್ಟಿದೆ.

=>  12ನೇ ಪಂಚವಾರ್ಷಿಕ ಯೋಜನೆಯ ಅಂತರ್ ವಲಯಗಳ  ಅನುದಾನಗಳು :
* ಸಾಮಾಜಿಕ ಮತ್ತು ಆರ್ಥಿಕ ವಲಯಗಳಲ್ಲಿನ ಅಧಿಕ ಹೂಡಿಕೆಯು ರಾಜ್ಯದ ಒಟ್ಟಾರೆ ಅಭಿವೃದ್ಧಿ ಸೂಚಕಗಳನ್ನು ಉತ್ತಮಗೊಳಿಸುವ ನಿರೀಕ್ಷೆಯಿದೆ.
* 12ನೆಯ ಪಂಚವಾರ್ಷಿಕ ಯೋಜನೆಯಲ್ಲಿ ಉತ್ತಮ ಪ್ರಗತಿ ಸಾಧಿಸಿದ ವಲಯಗಳೆಂದರೆ - ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಇತರೆ ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತರು, ನಂತರ ಕೈಗಾರಿಕೆ ಮತ್ತು ಖನಿಜಗಳು, ಗ್ರಾಮೀಣಾಭಿವೃದ್ಧಿ, ಕೃಷಿ ಮತ್ತು ಸಂಬಂಧಿಸಿದ ಸೇವೆಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ವೈದ್ಯಕೀಯ.

=> 2017-18 ನೇ ಸಾಲಿನ ಆಯವ್ಯಯದ ಯೋಜನೆಗಳು :
2017-18(ಆ.ಅಂ)  ನೇ ಸಾಲಿನ ಆಯವ್ಯಯದಲ್ಲಿ ಒಟ್ಟು 2275 ಯೋಜನೆಗಳಿದ್ದು, ಇವುಗಳಲ್ಲಿ 89 ಯೋಜನೆಗಳು (ಒಟ್ಟು ಯೋಜನೆಗಳ ಶೇ.4 ರಷ್ಟು)  ರೂ.500 ಕೋಟಿಗಿಂತ ಹೆಚ್ಚಿನ ಅನುದಾನವನ್ನು ಹೊಂದಿರುತ್ತದೆ. ಇದು ಸಂಪನ್ಮೂಲಗಳ ವಿರಳ ಹಂಚಿಕೆಯನ್ನು ತಡೆಹಿಡಿದು ಯೋಜನೆಗಳನ್ನು ತರ್ಕಬದ್ದವಾಗಿ ಸಮನ್ವಯಗೊಳಿಸಿ ಅದರ ಫಲಿತಾಂಶದ ಕಡೆ ಕೇಂದ್ರೀಕೃತ ಪ್ರಯತ್ನವನ್ನು ಮಾಡುವ ಅಗತ್ಯತೆಯನ್ನು ಸೂಚಿಸುತ್ತದೆ.

=> ಬಾಹ್ಯ ನೆರವಿನ ಯೋಜನೆಗಳು :
2017-18 ನೇ ಸಾಲಿನಲ್ಲಿ ವಿಶ್ವಬಾಂಕ್ ಹಾಗೂ ಇತರೆ ವಿದೇಶಿ ಸಂಸ್ಥೆಗಳ ನೆರವಿನೊಂದಿಗೆ ಒಟ್ಟು 13 ಬಾಹ್ಯ ನೆರವಿನ ಯೋಜನೆಗಳು ಅನುಷ್ಠಾನಗೊಳ್ಳುತ್ತಿದ್ದು. ಈ ಪೈಕಿ 5 - ನಗರಾಭಿವೃದ್ಧಿ ಇಲಾಖೆ, 3 - ಲೋಕೋಪಯೋಗಿ ಇಲಾಖೆ, ತಲಾ 2 ಜಲಸಂಪನ್ಮೂಲ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಗೆ ಒಳಪಟ್ಟಿರುತ್ತದೆ. ಮತ್ತೊಂದು ಯೋಜನೆಯಾದ ಸುಜಲಾ- ಯೋಜನೆಯನ್ನು ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಿಂದ ಅನುಷ್ಠಾನಗೊಳಿಸಲಾಗುತ್ತಿದೆ. 

=> ಪ್ರಸ್ತುತ ಸವಾಲುಗಳು ಹಾಗೂ ಮುಂದಿನ ದಾರಿ :  
ಮಹತ್ವದ ವಲಯಗಳಲ್ಲಿನ ವೆಚ್ಚದ ಅಗತ್ಯತೆಯನ್ನು ಭರಿಸಲು ಬೇಕಾದ ಸಂಪನ್ಮೂಲ ಸಂಗ್ರಹಣೆಯ ಸಲುವಾಗಿ ಅಧಿಕ ತೆರಿಗೆ ಪ್ರಯತ್ನವನ್ನು ಕಾಯ್ದುಕೊಳ್ಳಬೇಕಾಗಿರುವುದು ರಾಜ್ಯಕ್ಕೆ ಒಂದು ಸವಾಲಾಗಿರುತ್ತದೆ. ರಾಜ್ಯವು ವಿವೇಕಯುತ ವಿತ್ತೀಯ ಮಾನದಂಡವನ್ನು ಪಾಲಿಸುವ ಜೊತೆಗೆ ತುರ್ತು ಆರ್ಥಿಕ ವಲಯಗಳಿಗೆ ಅವಶ್ಯಕವಾದಷ್ಟು ನಿಧಿಯನ್ನು ಒದಗಿಸುವ ಅಗತ್ಯತೆಯನ್ನು ಸರಿದೂಗಿಸಬೇಕಾಗುತ್ತದೆ. ಈ ಮೊದಲೇ ಗುರುತಿಸಲ್ಪಟ್ಟ ಸವಾಲುಗಳೊಂದಿಗೆ ಕೆಲವು ಸವಾಲುಗಳು ಮುಂದುವರೆದಿದ್ದು, ಇವುಗಳು ಈ ಕೆಳಕಂಡಂತಿವೆ.

1. ತೆರಿಗೆ ಪ್ರಯತ್ನದ ಮಟ್ಟ:  
ವರ್ಷಗಳಿಂದೀಚೆಗೆ ಕರ್ನಾಟಕವು ದೇಶದಲ್ಲಿನ ಎಲ್ಲಾ ರಾಜ್ಯಗಳ ಪೈಕಿ ಅತ್ಯಂತ ಹೆಚ್ಚಿನ ಸ್ವಂತ ತೆರಿಗೆ ರಾಜಸ್ವ / ಜಿಎಸ್ಡಿಪಿ ಅನುಪಾತ (ತೆರಿಗೆ ಪ್ರಯತ್ನ)  ವನ್ನು ಸ್ಥಿರವಾಗಿ ಸಾಧಿಸುತ್ತಾ ಬಂದ ರಾಜ್ಯವಾಗಿದೆ. ಜಿ.ಎಸ್.ಟಿ.ಯಿಂದಾಗಿ ತೆರಿಗೆ ಮೂಲವು ಹೆಚ್ಚಾಗುವ ನಿರೀಕ್ಷೆ ಇದ್ದು, ಅದರಿಂದಾಗಿ ಈ ಪರಿಸ್ಥಿತಿಯು ಮುಂಬರುವ ವರ್ಷಗಳಲ್ಲಿ ಉತ್ತಮವಾಗಬಹುದು.

2. ರಾಜಸ್ವದ ಮೇಲಿನ ವೆಚ್ಚಗಳ ಹೆಚ್ಚಳದ ಬದ್ಧತೆಗಳು :  
* ಆಯವ್ಯಯದ ಗಾತ್ರದಲ್ಲಿನ ಬಹುಪಾಲು -> ಬದ್ದ ವೆಚ್ಚಗಳ ರೂಪದಲ್ಲಿರುವುದು ವಿಶಿಷ್ಟವಾಗಿದೆ. ಇದು ವೆಚ್ಚಗಳ ಮೇಲಿನ ನಿರ್ಧಾರದ ಅವಕಾಶವನ್ನು ಕಡಿಮೆಗೊಳಿಸುತ್ತದೆ.
* ವೇತನ, ಪಿಂಚಣಿ ಮತ್ತು ಬಡ್ಡಿ ಸಂದಾಯಗಳು ಮುಂತಾದ ಬದ್ಧ ವೆಚ್ಚಗಳು ಸಹ ರಾಜಸ್ವದ ಲೆಕ್ಕಕ್ಕೆ ಬರುತ್ತದೆ.
* ರಾಜಸ್ವ ಸ್ವೀಕೃತಿಗಳ ಶೇಕಡವಾರು ಪ್ರಮಾಣದಲ್ಲಿ ಬದ್ದ ರಾಜಸ್ವ ವೆಚ್ಚದ ಪ್ರಮಾಣವು -> ರಾಜ್ಯಕ್ಕೆ ತನ್ನ ಸ್ವಂತ ಸಂಪನ್ಮೂಲಗಳನ್ನು ಹೊಸ ಯೋಜನೆಗಳಿಗೆ ಹಂಚಲು ಇರುವ ಸ್ವಾತಂತ್ರದ ಮಿತಿಯನ್ನು ತೋರಿಸುತ್ತದೆ.
* ರಾಜ್ಯವು ವಿವೇಚನಾಯುತ ವೆಚ್ಚವನ್ನು ಪುನಶ್ಚೇತನ ಗೊಳಿಸುವುದು ಈಗಿನ ಅಗತ್ಯತೆಯಾಗಿದೆ.

3. ಬಂಡವಾಳ ವೆಚ್ಚ:  
* ಬಂಡವಾಳ ವೆಚ್ಚವನ್ನು ಬಹುತೇಕ ಬಂಡವಾಳ ಸ್ವೀಕೃತಿಯಿಂದ ಭರಿಸಬೇಕಾಗುತ್ತದೆ, ಇದರಲ್ಲಿ ಋಣೇತರ ಬಂಡವಾಳ ಸ್ವೀಕೃತಿಯು ಸೇರಿದ್ದು, ಸರ್ಕಾರಿ ಆಸ್ತಿಗಳನ್ನು ಮಾರಾಟ ಮಾಡಿ ಬಂದ ಸ್ವೀಕೃತಿ, ಸಾಲ ಮತ್ತು ಮುಂಗಡಗಳ ವಸೂಲಿ ಹಾಗೂ ಸಾಲಗಳು ಸೇರಿರುತ್ತದೆ.
-> ಅವಶ್ಯಕತೆಯಿರದ ಯೋಜನೆಗಳನ್ನು ತೆಗೆದುಹಾಕಿ, ಯಾವುದೇ ಗಣನೀಯ ಲಾಭವಿಲ್ಲದೆ 5 ವರ್ಷಗಳಿಗೂ ಅಧಿಕ ಅವಧಿಯಿಂದ ಅಸ್ತಿತ್ವದಲ್ಲಿರುವ ಯೋಜನೆಗಳಿಗೆ ಒಂದು ಅಂತಿಮ ಷರತ್ತು ವಿಧಿಸುವುದು, ಅಭಿವೃದ್ಧಿಯೇತರ ರಾಜಸ್ವ ವೆಚ್ಚವನ್ನು ಮಿತಗೊಳಿಸಿ ಮತ್ತು ರಾಜಸ್ವ ಸಂಗ್ರಹಣೆಯನ್ನು ಚುರುಕುಗೊಳಿಸುವ ಮೂಲಕ ರಾಜ್ಯವು ರಾಜಸ್ವ ಹೆಚ್ಚಳವನ್ನು ವೃದ್ಧಿಗೊಳಿಸುವ ಗುರಿಯನ್ನು ಹೊಂದಿ ಅದನ್ನು ಬಂಡವಾಳ ಸೃಜನೆ ಮತ್ತು ಉತ್ಪಾದಕ ವೆಚ್ಚಗಳಿಗಾಗಿ ಉಪಯೋಗಿಸಿಕೊಳ್ಳುವ ಭರವಸೆ ಹೊಂದಿದೆ.

4. ಹಂಚಿಕೆ ರಹಿತ / ಭಾಗಶಃ ಅನುದಾನದ ಬದ್ಧತೆಗಳು :  
ರಾಜ್ಯ ಸರ್ಕಾರವು ಇತ್ತೀಚಿನ ವರ್ಷಗಳಲ್ಲಿ ವಿತ್ತೀಯ ಹೊರೆಯನ್ನು ಉಂಟುಮಾಡಬಹುದಾದಂತಹ ಹಲವಾರು ಬದ್ಧತೆಗಳನ್ನು ಹೊಂದಿದೆ. ಆದ್ದರಿಂದ -> ವೆಚ್ಚದ ಸುಸ್ಥಿರತೆಯನ್ನು ಕಾಪಾಡಿಕೊಳ್ಳಲು ಒಂದು ಮಧ್ಯಮಾವಧಿ ಮುನ್ನೋಟವನ್ನು ರೂಪಿಸಿಕೊಳ್ಳಬೇಕಾಗಿರುವುದು ಮುಖ್ಯವಾಗಿರುತ್ತದೆ.

5. ಸಾರ್ವಜನಿಕ ಸಂಪನ್ಮೂಲಗಳ ಪುನರವಲೋಕನ:  
* ರಾಜ್ಯದ ರಾಜಸ್ವ ವೆಚ್ಚ ಬೆಳವಣಿಗೆಯ ಲಕ್ಷಣವೆಂದರೆ -> ಅದರ ಅತ್ಯಧಿಕ ಪಾಲು ಬದ್ಧ ವೆಚ್ಚವಾಗಿರುವುದು. ಆ ಮೂಲಕ ಅಗತ್ಯವಾದ ಸಾಮಾಜಿಕ ಮತ್ತು ಆರ್ಥಿಕ ಮೂಲಭೂತ ಸೌಲಭ್ಯಗಳ ಹೆಚ್ಚುತ್ತಿರುವ ಬೇಡಿಕೆಗಳನ್ನು ಭರಿಸಲು ಇತರ ಬಂಡವಾಳ ಹೂಡಿಕೆಗಳನ್ನು ಕುಶಲತೆಯಿಂದ ಮುಂದುವರೆಸಲು ಅಲ್ಪ ಅವಕಾಶವನ್ನು ಕಲ್ಪಿಸುವುದು.
* ಶಿಕ್ಷಣದ ಹಕ್ಕು, ಆಹಾರ ಭದ್ರತೆ ಅಧಿನಿಯಮ ಮತ್ತು ಉದ್ಯೋಗ ಖಾತರಿ  ಕಾರ್ಯಕ್ರಮಗಳಂತಹ ಶಾಸನಾತ್ಮಕ ಅಧಿನಿಯಮಗಳ ಹಿನ್ನಲೆಯಲ್ಲಿ ಸಾರ್ವಜನಿಕ ಸಂಪನ್ಮೂಲಗಳ ಮೇಲಿನ ಬೇಡಿಕೆಯು ಹೆಚ್ಚುತ್ತಿದೆ. 

6. ಕೇಂದ್ರ ಸರ್ಕಾರದಿಂದ ಯೋಜನೆಗಳ ಅನುದಾನದಲ್ಲಿ ಕಡಿತ:  
ಕೇಂದ್ರ ಸರ್ಕಾರವು ಕೇಂದ್ರ ಪುರಷ್ಕೃತ ಯೋಜನೆಗಳಿಗಿರುವ ಅನುದಾನವನ್ನು ಕಡಿತಗೊಳಿಸಿದೆ. ಅನೇಕ ಯೋಜನೆಗಳು ಚಾಲ್ತಿಯಲ್ಲಿದ್ದು ಅವುಗಳನ್ನು ತಕ್ಷಣ ನಿಲ್ಲಿಸುವುದು ಸಾಧ್ಯವಿಲ್ಲ. ಇದರ ಪರಿಣಾಮ ರಾಜ್ಯಕ್ಕೆ ಕಡಿತವನ್ನು ಸರಿತೂಗಿಸುವುದು ಹೆಚ್ಚು ಹೊರೆಯಾಗುತ್ತದೆ. ಈ ಯೋಜನೆಗಳಿಗೆ ಸಾಕಷ್ಟು ಸಂಪನ್ಮೂಲಗಳನ್ನು ಹುಡುಕುವುದು ರಾಜ್ಯದ ಆರ್ಥಿಕ ಸ್ಥಿತಿಗೆ ದೊಡ್ಡ ಸವಾಲಾಗಿದೆ.

7. ಕಡಿಮೆ ತೆರಿಗೆಯೇತರ ರಾಜಸ್ವ:
 * ರಾಜಸ್ವ ಸ್ವೀಕೃತಿಯಲ್ಲಿ ತೆರಿಗೆಯೇತರ ರಾಜಸ್ವದ ಪಾಲು ಹಿಂದಿನ ಹಲವಾರು ವರ್ಷಗಳಿಂದಲೂ ಇಳಿಮುಖಗೊಂಡಿದೆ -> ಪ್ರಮುಖವಾಗಿ ವೆಚ್ಚ ವಸೂಲಾತಿ ದರದಲ್ಲಿನ ಇಳಿಕೆ ಮತ್ತು ಕ್ಷೀಣತೆ ಸಾರ್ವಜನಿಕ ಉದ್ದಿಮೆಗಳ ಕಳಪೆ ಕಾರ್ಯನಿರ್ವಹಣೆ ಹಾಗೂ ಲಾಭಕರವಲ್ಲದ, ದುಬಾರಿ ಸಹಾಯ ಧನಗಳಿಂದಾಗಿ ತೆರಿಗೆಯೇತರ ರಾಜಸ್ವದ ಪ್ರಮಾಣವು ನಗಣ್ಯವಾಗಿದೆ.
* ಆಡಳಿತ ಇಲಾಖೆಗಳಿಂದ ಕಾಲಕಾಲಕ್ಕೆ ಕ್ರಮಬದ್ದವಾಗಿ ನಡೆಸಬೇಕಾಗಿದ್ದ ಮೇಲ್ವಿಚಾರಣೆಯ ಕೊರತೆ ಮತ್ತು ಬಳಕೆ ಶುಲ್ಕಗಳನ್ನು ಪರಿಷ್ಕರಿಸದಿರುವುದು ತೆರಿಗೆಯೇತರ ರಾಜಸ್ವವು ನಿಶ್ಚಲಗೊಳ್ಳಲು ಮುಖ್ಯ ಕಾರಣಗಳಲ್ಲೊಂದಾಗಿದೆ.
* ಪ್ರಸ್ತುತ ಇರುವ ತೆರಿಗೆಯೇತರ ಸ್ವೀಕೃತಿಗಳನ್ನು ಪುನರ್ ಪರಿಶೀಲಿಸಿ ದರಗಳನ್ನು ಪರಿಷ್ಕರಿಸುವ ಹಾಗೂ ನಿಯಮಿತವಾಗಿ ದರಗಳ ಪರಿಷ್ಕರಣೆ ನಡೆಯುವಂತೆ ವ್ಯವಸ್ಥಿತ ಕ್ರಮ ರೂಪಿಸಲು ಸಮಿತಿಯನ್ನು ರಚಿಸಲಾಗಿದೆ.

8. ಕ್ರೋಢೀಕೃತ ಸಾಲ ತೀರಿಕೆ ನಿಧಿ (ಸಿ.ಎಸ್.ಎಫ್-Consolidated Sinking Fund) :  
14ನೇ ಹಣಕಾಸು ಆಯೋಗವು ಸಿ.ಎಸ್.ಎಫ್/ ಕ್ರೋಢೀಕೃತ ಸಾಲ ತೀರಿಕೆ ನಿಧಿ ಅನ್ನು ವಿವೇಕಯುತ ವಿತ್ತೀಯ ನಿರ್ವಹಣೆಯ ಅವಿಭಾಜ್ಯ ಭಾಗವೆಂದು ಹಾಗೂ ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚುವುದೆಂದು ಅಭಿಪ್ರಾಯಪಟ್ಟಿದೆ.

9. ಸಾಲ ಪಡೆಯುವ ಕಾಲಾವಧಿ:  
* ರಾಜ್ಯದ ರಾಜಸ್ವ ಸ್ವೀಕೃತಿಗಳ ಮಾಸಿಕ ಹರಿವು ಇಡೀ ವರ್ಷದಾದ್ಯಂತ ಹೆಚ್ಚು ಕಡಿಮೆ ಒಂದೇ ರೀತಿ ಇರುವುದೆಂಬುವುದನ್ನು ಗಮನಿಸಲಾಗಿದೆ.
* ಆದಾಗ್ಯೂ, ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ವೆಚ್ಚವು ಸ್ಪಷ್ಟ ಉಲ್ಬಣವನ್ನು ತೋರುತ್ತದೆ.
* ನಗದು ಹರಿವಿನ ಅವಶ್ಯಕತೆಗಾಗಿ 3ನೇ ಹಾಗೂ 4ನೇ ತ್ರೆ ಮಾಸಿಕಗಳಲ್ಲಿ ಸಾಲಗಳನ್ನು ಮಾಡಲಾಗುವುದು -> ಇದು ಬಡ್ಡಿ ಪಾವತಿಯ ಹೊರೆಯನ್ನು ಸಹ ಕಡಿಮೆಗೊಳಿಸುತ್ತದೆ. 

=>  ಸಮಗ್ರ ನಿರ್ಣಯ ಬೆಂಬಲ ವ್ಯವಸ್ಥೆ:  
* ಈ ವ್ಯವಸ್ಥೆಯಿಂದ ಸರ್ಕಾರದ ಯೋಜನೆಗಳ ಪ್ರಗತಿಯನ್ನು ಜಾರಿಗೊಳಿಸಿದ ಸ್ಥಳದಿಂದ ನೇರವಾಗಿ ಕಾಣಬಹುದು.
* ಇದರಿಂದ ಸರ್ಕಾರಕ್ಕೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಯೋಜನೆಗಳನ್ನು ರೂಪಿಸಲು ತುಂಬಾ ಸಹಾಯಕಾರಿಯಾಗುತ್ತದೆ.
* ಈ ವ್ಯವಸ್ಥೆಯು ಅವಶ್ಯಕತೆಗನುಗುಣವಾಗಿ ನ್ಯಾಯಸಮ್ಮತವಾದ ಹಂಚಿಕೆಯನ್ನು ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕುಗಳಿಗೆ ಅವುಗಳ ಸಂಪನ್ಮೂಲಗಳ ಸಮರ್ಪಕವಾದ ಬಳಕೆಯನ್ನು ವಿಕೇಂದ್ರೀಕೃತ ಸಹಭಾಗಿತ್ವದ ಮೇಲ್ವಿಚಾರಣೆಯೊಂದಿಗೆ ನೇರವೇರುವುದನ್ನು ಖಚಿತ ಪಡಿಸುತ್ತದೆ ಹಾಗೂ ಸರ್ಕಾರಕ್ಕೆ ಸಮಗ್ರ ಜಿಲ್ಲೆ ಹಾಗೂ ಟಕ ಯೋಜನೆಯನ್ನು ರೂಪಿಸಲು ಸಾಧ್ಯವಾಗುತ್ತದೆ.

=>  ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ) :  
* ರಾಜ್ಯದ ತೆರಿಗೆ ಸಂಗ್ರಹಣೆಯಲ್ಲಿ ಇದು ದೀರ್ಘಾವಧಿಯಲ್ಲಿ ಧನಾತ್ಮಕ ಪರಿಣಾಮವನ್ನು ಬೀರುತ್ತದೆಯಾದರೂ, ಅಲ್ಪ ಮತ್ತು ಮಧ್ಯಮಾವಧಿಗಳಲ್ಲಿ, ರಾಜಸ್ವಗಳ ಮೇಲೆ ಇದು ಋಣಾತ್ಮಕ ಪರಿಣಾಮವನ್ನು ಉಂಟು ಮಾಡುವ ಸಂಭವವಿದೆ.
* ಸ್ಥಿತ್ಯಂತರ ಸಮಸ್ಯೆಗಳಿಂದಾಗಿ ಸರಕು ಮತ್ತು ಸೇವಾ ತೆರಿಗೆಯು ಮೂಲ ಸ್ಥಳಾಧಾರಿತ ತೆರಿಗೆಯಿಂದ ಗಮ್ಯಾಧಾರಿತ ತೆರಿಗೆಗೆ ಪಲ್ಲಟಗೊಳ್ಳುವುದರಿಂದ ಕರ್ನಾಟಕಕ್ಕೆ ತೆರಿಗೆ ನಷ್ಟ ಉಂಟಾಗುತ್ತದೆ.
* ಸರಕು ಮತ್ತು ಸೇವಾ ತೆರಿಗೆಯನ್ನು ಜಾರಿಗೊಳಿಸುವ ದಿನಾಂಕದಿಂದ 5 ವರ್ಷಗಳವರೆಗೆ ಕೇಂದ್ರ ಸರ್ಕಾರವು ಪರಿಹಾರ ನೀಡುವ ಹಿನ್ನಲೆಯಲ್ಲಿ ಇದನ್ನು ಅವಲೋಕಿಸಬೇಕಾಗುತ್ತದೆ.

=>  ಕೇಂದ್ರ ಪುರಸ್ಕೃತ ಯೋಜನೆಗಳು:  
ಕೇಂದ್ರ ಸರ್ಕಾರವು ಅಂಬ್ರೆಲಾ ಯೋಜನೆಯ ಪರಿಕಲ್ಪನೆಯ ಮೂಲಕ -> ಅಸ್ತಿತ್ವದಲ್ಲಿರುವ 66 ಕೇಂದ್ರ ಪುರಷ್ಕೃತ ಯೋಜನೆಗಳನ್ನು 28 ಕ್ಕೆ ಇಳಿಸಿದೆ. ಈ 28 ಯೋಜನೆಗಳನ್ನು 3 ವರ್ಗಗಳಾಗಿ ವರ್ಗೀಕರಿಸಲಾಗಿದೆ. 1)  ಪ್ರಮುಖ ಯೋಜನೆಗಳಲ್ಲಿ ಪ್ರಮುಖವಾದ ಯೋಜನೆಗಳಿಗೆ ಪ್ರಸ್ತುತ ಇರುವ ಹಂಚಿಕೆಯ ಮಾದರಿಯನ್ನೆ ಮುಂದುವರಿಸಲಾಗಿದೆ. 
2)  ಪ್ರಮುಖ ಯೋಜನೆಗಳಿಗೆ 60: 40 (ಕೇಂದ್ರ: ರಾಜ್ಯ)  ಮತ್ತು 
3)  ಐಚ್ಛಿಕ ಯೋಜನೆಗಳಿಗೆ ಹಂಚಿಕೆ ಮಾದರಿಯು 50: 50 (ಕೇಂದ್ರ: ರಾಜ್ಯ)  ಆಗಿರುತ್ತದೆ. 

* ಆಯವ್ಯಯ ವ್ಯವಸ್ಥೆಯಲ್ಲಿ ಯೋಜನೆ ಮತ್ತು ಯೋಜನೇತರ ವೆಚ್ಚದ ಅಂತರ ಇದು ಸಾರ್ವಜನಿಕ ವೆಚ್ಚದ ದಕ್ಷತೆಯನ್ನು ನಿರ್ಣಯಿಸುವಲ್ಲಿ ಉಪಯುಕ್ತವಾಗಿದೆ.
 -> 2017-18 ರ ವಿತ್ತೀಯ ವರ್ಷದಿಂದ ಸರ್ಕಾರಿ ವೆಚ್ಚದಲ್ಲಿ ಕೇಂದ್ರ ಸರ್ಕಾರ ಈ ವರ್ಗೀಕರಣವನ್ನು ತೆಗೆದು ಹಾಕಿದೆ.
 -> ಇದೇ ಕಾರಣಗಳಿಗಾಗಿ ರಾಜ್ಯ ಸರ್ಕಾರವು 2017-18 ರ ವಿತ್ತೀಯ ವರ್ಷದಿಂದ ಸರ್ಕಾರದ ಆಯವ್ಯಯದಲ್ಲಿ ಯೋಜನೆ ಮತ್ತು ಯೋಜನೇತರ ಅಂತರವನ್ನು ತೆಗೆದುಹಾಕಿದೆ.

=>  ಮಹಿಳಾ ಉದ್ದೇಶಿತ ಆಯವ್ಯಯ :  
* ಕರ್ನಾಟಕ ರಾಜ್ಯವು 2007-08 ರಿಂದ ಮಹಿಳಾ ಉದ್ದೇಶಿತ ಆಯವ್ಯಯ ದಾಖಲೆಯನ್ನು ತಯಾರಿಸಲು ಕ್ರಮ ತೆಗೆದುಕೊಂಡ ರಾಜ್ಯಗಳಲ್ಲೊಂದು ಪ್ರವರ್ತಕ ರಾಜ್ಯವಾಗಿದೆ.
* ಕನಿಷ್ಟಪಕ್ಷ ಶೇ. 30% ರಷ್ಟು ಮಹಿಳಾ ಪಲಾನುಭವಿಗಳಿರುವ ರಾಜ್ಯದ ಎಲ್ಲಾ ಕಾರ್ಯಕ್ರಮಗಳು/ ಯೋಜನೆಗಳನ್ನು ವರ್ಗ 'ಎ' ಮತ್ತು 'ಬಿ' ಗಳೆಂದು ವರ್ಗೀಕರಿಸಲಾಗಿದೆ.
* 'ಎ' ವರ್ಗದ ಯೋಜನೆಗಳು ಶೇ. 100% ರಷ್ಟು ಮಹಿಳಾ ಫಲಾನುಭವಿಗಳನ್ನು & 'ಬಿ' ವರ್ಗದ ಯೋಜನೆಗಳು ಶೇ. 30-99% ರಷ್ಟು ಮಹಿಳಾ ಫಲಾನುಭವಿಗಳನ್ನೊಳಗೊಂಡಿದ್ದು - 2017-18 (ಆ.ಅಂ) ನೇ ಸಾಲಿನಲ್ಲಿ ಕ್ರಮವಾಗಿ 68 & 790 ಯೋಜನೆಗಳಿರುತ್ತದೆ.

=>  ಖಜಾನೆ 2 :  
* ರಾಜ್ಯ ಸರ್ಕಾರದ ಎಲ್ಲಾ ಆರ್ಥಿಕ ವಹಿವಾಟುಗಳನ್ನು ಒಂದೇ ವೇದಿಕೆಯಲ್ಲಿ ಆನ್ಲೈನ್ ಅನುಕಲಿತ ಪದ್ದತಿಯಲ್ಲಿ ನಿರ್ವಹಿಸಲು ಉದ್ದೇಶಿಸಲಾದ ಆರ್ಥಿಕ ಇಲಾಖೆಯ ಖಜಾನೆ-2ಖ ಯೋಜನೆಯು ಅನುಕಲಿತ ಆರ್ಥಿಕ ನಿರ್ವಹಣಾ ಪದ್ದತಿಯಾಗಿರುತ್ತದೆ.
* ಪ್ರಸ್ತುತ ರಾಜ್ಯಾದ್ಯಂತ ವಿವಿಧ ವೆಚ್ಚಗಳ ಮಾಡ್ಯೂಲ್ಗಳು ಖಜಾನೆ, ಪೊಲೀಸ್ ಹಾಗೂ ಅರಣ್ಯ ಇಲಾಖೆಗಳಲ್ಲಿ ಪ್ರಗತಿಯಲ್ಲಿದೆ.
* ಹಾಗೆಯೇ ಸಾರಿಗೆ, ಕಾರ್ಖಾನೆಗಳು ಮತ್ತು ಬಾಯ್ಲರ್ಗಳು, ಅಬಕಾರಿ ಮತ್ತು ಸಂಚಾರಿ ಪೊಲೀಸ್ ಇಲಾಖೆಗಳು -> ಜಮೆಗಳ ಮಾಡ್ಯೂಲ್ ಗಳನ್ನು ಬಳಸುತ್ತಿವೆ.

=>  ನಿಧಿ ಬಿಡುಗಡೆ ಮಾಡಲು ಆಡಳಿತ ಇಲಾಖೆಗಳಿಗೆ ಅಧಿಕಾರಗಳ ಪ್ರತ್ಯಾಯೋಜನೆ:  
* ಯೋಜನೆಗಳ ಅನುಷ್ಟಾನದ ಗತಿ ಮತ್ತು ಯೋಜನಾ ವೆಚ್ಚವನ್ನು ಸುಧಾರಿಸುವ ದೃಷ್ಟಿಯಿಂದ, ಆಯವ್ಯಯ ಅವಕಾಶದ ಶೇ.75 ರಷ್ಟನ್ನು ಆರ್ಥಿಕ ವರ್ಷದ ಮೊದಲ 3 ತ್ರೈಮಾಸಿಕಗಳಿಗೆ ನಿಧಿಯನ್ನು ಬಿಡುಗಡೆ ಮಾಡುವ ಅಧಿಕಾರವನ್ನು ಸಂಬಂಧಪಟ್ಟ ಆಡಳಿತ ಇಲಾಖೆಗಳಿಗೆ ಪ್ರತ್ಯಾಯೋಜಿಸಿದೆ.
* ಸುಮಾರು ಶೇ.40 ರಷ್ಟು ವೆಚ್ಚವು - ಕೊನೆಯ ತ್ರೆ ಮಾಸಿಕದಲ್ಲಿ ಆಗುವುದು ಕಂಡುಬಂದಿದೆ.

->  ರಾಜ್ಯ ಸರ್ಕಾರವು ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ವಿತ್ತೀಯ ನಿರ್ವಹಣೆ ಮತ್ತು ಪರಿಶೀಲನಾ ಸಮಿತಿಯನ್ನು ರಚಿಸಿದ್ದು, ಈ ಸಮಿತಿಯು -> ನಿಯಮಾನುಸಾರ ರಾಜ್ಯದ ಹಣಕಾಸು ಮತ್ತು ಋಣದ ಸ್ಥಿತಿಗತಿಯ ಬಗ್ಗೆ ಪುನರವಲೋಕಿಸಿ ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಗೊತ್ತುಪಡಿಸಿರುವ ಮಾನದಂಡಗಳಿಗೆ ಬದ್ದವಾಗಿ ಅನುಸರಿಸಬೇಕಾದ ಪರಿಹಾರೋಪಾಯಗಳ ಬಗ್ಗೆ ಹಣಕಾಸು ಸಚಿವರಿಗೆ ಸಲಹೆ ನೀಡುತ್ತದೆ.

=>  14ನೇ ಹಣಕಾಸು ಆಯೋಗಶಿಫಾರಸ್ಸುಗಳು :
*   ರಾಜ್ಯಗಳಿಗೆ ಕೇಂದ್ರದ ಪಾಲಿನ ಹಂಚಿಕೆ ಪ್ರಮಾಣವನ್ನು -> ಶೇ.32 ರಿಂದ ಶೇ.42ಕ್ಕೆ ಹೆಚ್ಚಿಸಲು ಶಿಫಾರಸ್ಸು ಮಾಡಿದೆ.
* ಎಲ್ಲಾ ರಾಜ್ಯಗಳ ವಿತ್ತೀಯ ಕೊರತೆಯನ್ನು ಜಿಎಸ್ಡಿಪಿಯ - ಶೇ.3% ರ ವಾರ್ಷಿಕ ಮಿತಿಗೆ ನಿಗದಿಪಡಿಸುವುದು.
* ಹಿಂದಿನ ವರ್ಷದಲ್ಲಿ, ರಾಜ್ಯಗಳ ಸಾಲ - ಜಿಎಸ್ಡಿಪಿ ಪ್ರಮಾಣವು 25% ಗಿಂತ ಕಡಿಮೆ/ಸಮವಾಗಿದ್ದರೆ -> ಸಾಲದ ಮಿತಿಗಳನ್ನು ನಿಗದಿಪಡಿಸಬೇಕಾದ ಪ್ರಮಾಣ ಯಾವುದೋ ಅದಕ್ಕಿಂತ 0.25% ರಷ್ಟು ಹೆಚ್ಚಿನ ಹೊಂದಾಣಿಕೆಗೆ ರಾಜ್ಯಗಳು ಅರ್ಹವಾಗಿರುತ್ತವೆ.
* ಬಡ್ಡಿ ಸಂದಾಯಗಳು ಹಿಂದಿನ ವರ್ಷದಲ್ಲ್ಲಿನ ರಾಜಸ್ವ ಜಮೆಗಳ ಶೇ.10% ಕ್ಕಿಂತ ಕಡಿಮೆ / ಅದಕ್ಕೆ ಸಮನಾಗಿದ್ದರೆ - ಸಾಲ ಪಡೆಯುವ ಮಿತಿಗಳನ್ನು ನಿಗದಿಪಡಿಸುವುದಕ್ಕಾಗಿ ರಾಜ್ಯಗಳು ನಿಗದಿತ ವರ್ಷದಲ್ಲ್ಲಿ ಜಿ.ಎಸ್.ಡಿ.ಪಿ ಯ ಶೇ.0.25 ರಷ್ಟು ಹೆಚ್ಚುವರಿ ಸಾಲ ಪಡೆಯುವ ಮಿತಿಗೆ ಅರ್ಹವಾಗುವುವು. -> ರಾಜ್ಯಕ್ಕೆ ಈ ಪ್ರಕಾರವಾಗಿ ಮೇಲಿನ ಎರಡು ಆಯ್ಕೆಗಳು ಲಭ್ಯವಿದ್ದ್ದು, ಮೇಲಿನ ಯಾವುದೇ ಮಾನದಂಡಗಳನ್ನು ಪೂರೈಸಿದ್ದಲ್ಲಿ ಪ್ರತ್ಯೇಕವಾಗಿ ಅಥವಾ ಮೇಲಿನ ಎರಡೂ ಮಾನದಂಡಗಳನ್ನು ಪೂರೈಸಿದರೆ ಏಕಕಾಲದಲ್ಲಿ ಈ ಆಯ್ಕೆಗಳನ್ನು ಉಪಯೋಗಿಸಿಕೊಳ್ಳಬಹುದು. ಹೀಗಾಗಿ, ರಾಜ್ಯವು ನಿದಿಷ್ಟ ವರ್ಷದಲ್ಲ್ಲಿ ಶೇ.3.5 ರಷ್ಟು ಗರಿಷ್ಠ ವಿತ್ತೀಯ ಕೊರತೆ ಜಿ.ಎಸ್.ಡಿ.ಪಿ ಮಿತಿಯನ್ನು ಹೊಂದಬಹುದಾಗಿರುತ್ತದೆ.
* ಒಂದು ವೇಳೆ ಯಾವುದೇ ರಾಜ್ಯವು ಪ್ರಥಮ 4  ವರ್ಷಗಳ ಅವಾರ್ಡ್ ಅವಧಿಯಲ್ಲಿ (2015-16 ರಿಂದ 2018-19)ಯ ಯಾವುದೇ ನಿರ್ದಿಷ್ಟ ವರ್ಷದಲ್ಲಿ ಜಿ.ಎಸ್.ಡಿ.ಪಿ ಯ ಶೇ.3 ರಷ್ಟು ಮಂಜೂರಾದ ಸಾಲ ಪಡೆಯುವ ಮಿತಿಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಾಗದಿದ್ದರೆ -> ಮುಂಬರುವ ವರ್ಷದಲ್ಲಿ ಆದರೆ ಅವಾರ್ಡ್ ಅವಧಿಯೊಳಗೆ ಮಾತ್ರವೇ ಬಳಸದೇ ಉಳಿದ ಸಾಲದ ಮೊತ್ತವನ್ನು ಪಡೆಯುವ ಅವಕಾಶವನ್ನು ಹೊಂದಿರುತ್ತದೆ. 

ಕೃಪೆ: ಕರ್ನಾಟಕ ರಾಜ್ಯ ಆರ್ಥಿಕ ಸಮೀಕ್ಷೆ -2018 ಪುಸ್ತಕ.
🌍 ವಾಟ್ಸಪ್ ಮೂಲಕ ಅಪ್ಡೆಟ್ಸ್ ಪಡೆಯಲು 8217737030 ನಂಬರ್ ಗೆ Hello Spardha Vijaya  ಎಂದು ನಿಮ್ಮ ವಾಟ್ಸಪ್ ಮೂಲಕ ಮೆಸ್ಸೇಜ್ ಮಾಡಿ. 

Post a Comment

0 Comments