ಭಾರತದ ಭೌಗೋಳಿಕ ಲಕ್ಷಣಗಳು
· * ಭಾರತ ದೇಶವು ಏಷ್ಯಾ ಖಂಡದ ದಕ್ಷಿಣ ಭಾಗದಲ್ಲಿದೆ, ಮೂರುಕಡೆ ನೀರಿನಿಂದಲೂ ಮತ್ತು ಒಂದು ಕಡೆ ಭೂಭಾಗದಿಂದಲೂ ಆವೃತವಾಗಿದ್ದು, ಇದೊಂದು ಪರ್ಯಾಯ ದ್ವೀಪವಾಗಿದೆ.
* ಇಂದು 1)ಪಾಕಿಸ್ತಾನ 2)ಆಫ್ಘಾನಿಸ್ಥಾನ 3)ಚೀನಾ 4)ನೇಪಾಳ 5)ಭೂತಾನ್ 6)ಬಾಂಗ್ಲ ಮತ್ತು 7)ಮಯನ್ಮಾರ್ ದೇಶಗಳೊಂದಿಗೆ ತನ್ನ ಭೂಗಡಿಯನ್ನು ಹೊಂದಿದೆ.
* 29 ರಾಜ್ಯಗಳು ಹಾಗೂ 6 ಕೇಂದ್ರಾಡಳಿತ ಪ್ರದೇಶಗಳು ಮತ್ತು ಒಂದು ರಾಷ್ಟ್ರ ರಾಜಧಾನಿ (ದೆಹಲಿ) ಪ್ರದೇಶ ಇದರ ವ್ಯಾಪ್ತಿಯಲ್ಲಿವೆ.
* ಉತ್ತರದ ಹಿಮಾಲಯ ಪರ್ವತ ಶ್ರೇಣಿಯು ಜಗತ್ತಿನಲ್ಲೇ ಅತ್ಯಂತ ಎತ್ತರವಾದ ಶಿಖರಗಳನ್ನು ಒಳಗೊಂಡಿದೆ. ಭಾರತದ ಸುರಕ್ಷತೆಯನ್ನು ಹಾಗೂ ಭದ್ರತೆಯನ್ನು ಇವು ಕಾಯ್ದಿರಿಸಲು ಸಹಾಯಕವಾಗಿವೆ. ಪ್ರಾಚೀನ ಭಾರತದ ಮೇಲೆ ಉತ್ತರದ ಹಿಮಾಲಯದ ಮೂಲಕ ಆದ ಅತಿಕ್ರಮಣಗಳು ವಿರಳ.
* ವಾಯವ್ಯ ಭಾರತದಲ್ಲಿನ ಬೊಲಾನ್ ಮತ್ತು ಖೈಬರ್ ಕಣಿವೆಮಾರ್ಗಗಳ ಮೂಲಕವೇ ದಾಳಿಗಳು ಸಂಭವಿಸಿವೆ ಎನ್ನಬಹುದು. * ಅತ್ಯಂತ ಫಲವತ್ತಾದ ಮ್ತು ಸಮತಟ್ಟಾದ ಸಿಂಧೂ ಗಂಗಾ ಬಯಲು ಪ್ರದೇಶಗಳಲ್ಲಿ - ಪ್ರಾಚೀನ ನಾಗರಿಕತೆಗಳಾದ ಸಿಂಧೂ ಮತ್ತು ವೇದಕಾಲದ ನಾಗರಿಕತೆಗಳು ಮೂಡಿಬಂದಿವೆ.
* ಸಾಮಾನ್ಯವಾಗಿ ಯಾರು ಗಂಗಾನದಿಯ ಫಲವತ್ತಾದ ಪ್ರದೇಶದ ಮೇಲೆ ನಿಯಂತ್ರಣವನ್ನು ಹೊಂದಿದ್ದರೋ ಆ ರಾಜಮನೆತನಗಳವರೇ ಚಕ್ರಾಧಿಪತಿಗಳೂ ಆಗಿದ್ದರು.
* ನರ್ಮದಾ ನದಿಯು ಭಾರತವನ್ನು-ಉತ್ತರದ ಎತ್ತರ ಪ್ರದೇಶ ಅಥವಾ ಮಾಳ್ವ ಪ್ರಸ್ಥಭೂಮಿ ಹಾಗೂ ದಖನ್ ಪ್ರಸ್ಥಭೂಮಿ ಎಂದು ಎರಡು ಭಾಗಗಳನ್ನಾಗಿ ವಿಂಗಡಿಸಿದೆ- ಮೌರ್ಯರು ಹಾಗೂ ಗುಪ್ತರು ಪ್ರಾಚೀನ ಭಾರತದ ಸನ್ನಿವೇಶದಲ್ಲಿ ಭಾರತದ ಈ ಎರಡು ಭಾಗಗಳನ್ನು ಆಳಿದರು.
* ಭಾರತದ ಕರಾವಳಿಯ ವಿಸ್ತೀರ್ಣ-6100 ಕಿ.ಮೀ.
* ಪೂರ್ವ ಕರಾವಳಿಯನ್ನು-ಕೋರಮಂಡಲದ ತೀರವೆಂದು ಮತ್ತು ಪಶ್ಚಿಮದ ಕರಾವಳಿಯನ್ನು-ಕೊಂಕಣ/ಮಲಬಾರ್ ತೀರವೆಂದು ಕರೆದಿದ್ದಾರೆ.
* ರೇವು ಪಟ್ಟಣಗಳ ಅಭಿವೃದ್ಧಿಯು ಸಾಧ್ಯವಾಗಿ ದಕ್ಷಿಣದಲ್ಲಿ ಪ್ರಬಲ ರಾಜ್ಯಗಳಾದ ಪಾಂಡ್ಯ, ಚೇರ ಹಾಗೂ ಚೋಳರ ರಾಜ್ಯಗಳ ಉದಯಕ್ಕೆ ಕಾರಣವಾಯಿತು.
*******
ಭೂಪಟದ ಅಧ್ಯಯನ
(1) ಹರಪ್ಪ: ಸಿಂಧೂ ನಾಗರಿಕತೆಯ ಪ್ರಮುಖ ನಿವೇಶನಗಳಲ್ಲಿ ಒಂದಾದ ಹರಪ್ಪ ಪ್ರದೇಶವು ರಾವಿ ನದಿಯ ದಡದಲ್ಲಿದೆ. ಇದು ಇಂದು ಪಾಕಿಸ್ತಾನದ ಪಶ್ಚಿಮ ಪಂಜಾಬ್ನ ಮೊಂಟೆಗೊಮರಿ ಜಿಲ್ಲೆಯಲ್ಲಿದೆ. 1921ರಲ್ಲಿ ದಯರಾಂ ಸಹಾನಿಯವರು ಈ ನಿವೇಶನವನ್ನು ಉತ್ಖನನ ಮಾಡಿದರು. ಮಹಾ ಉಗ್ರಾಣ ಇಲ್ಲಿ ಕಂಡುಬರುವ ಪ್ರಮುಖ ಕಟ್ಟಡವಾಗಿದೆ.
(2) ತಕ್ಷಶಿಲಾ: ಇದು ಪಾಕಿಸ್ತಾನದಲ್ಲಿದ್ದು,
ಹಿಂದೆ ಗಾಂಧಾರ ಪ್ರಾಂತ್ಯದ ರಾಜಧಾನಿಯಾಗಿತ್ತು. ತಕ್ಷಶಿಲಾ ವಿಶ್ವವಿದ್ಯಾಲಯವು ಪ್ರಾಚೀನ ಭಾರತದಲ್ಲಿ ಪ್ರಮುಖ ವಿದ್ಯಾಕೇಂದ್ರವಾಗಿತ್ತು. ಕೌಟಿಲ್ಯನು ಈ ವಿಶ್ವವಿದ್ಯಾಲಯದಲ್ಲಿ ಆಚಾರ್ಯನಾಗಿದ್ದನು.
(3) ಪಾಟಲಿಪುತ್ರ: ಗಂಗಾನದಿಯ ದಂಡೆಯ ಮೇಲಿರುವ ಇದು ಪ್ರಸ್ತುತ ಪಾಟ್ನ ಎಂದು ಕರೆಯಲ್ಪಡುತ್ತಿರುವ ಬಿಹಾರ ರಾಜ್ಯದ ರಾಜಧಾನಿಯಾಗಿದೆ. ಇದು ಮಗಧ ಸಾಮ್ರಜ್ಯ, ಮೌರ್ಯರು ಮತ್ತು ಗುಪ್ತರ ರಾಜಧಾನಿಯಾಗಿತ್ತು.
(4) ಬಾದಾಮಿ: ಇದು ಬಾಗಲಕೋಟೆ ಜಿಲ್ಲೆಯಲ್ಲಿದೆ. ಬಾದಾಮಿಯ ಆರಂಭಿಕ ಹೆಸರು ವಾತಾಪಿಯಾಗಿದ್ದು, ಇದು ಚಾಲುಕ್ಯರ ರಾಜಧಾನಿಯಾಗಿತ್ತು, ಇದು ಗುಹಾಂತರ ದೇವಾಲಯಗಳಿಗೆ ಪ್ರಸಿದ್ಧಿಯಾಗಿದೆ.
(5) ಕಂಚಿ: (ಕಾಂಚಿಪುರಂ) ಇದು ತಮಿಳುನಾಡಿನ ಮದ್ರಾಸ್ ಸಮೀಪದಲ್ಲಿದೆ. ಪಲ್ಲವರ ರಾಜಧಾನಿಯಾಗಿತ್ತು. ಹಲವಾರು ಶೈವ ಮತ್ತು ವೈಷ್ಣವ ದೇವಾಲಯಗಳಿಗೆ ಪ್ರಸಿದ್ಧಿಯಾಗಿದೆ. ವಿಶ್ವ ಪ್ರಸಿದ್ಧ ಕಾಮಾಕ್ಷಿ ದೇವಾಲಯ ಇಲ್ಲಿದೆ.
(6) ಹಳೇಬೀಡು: ಇದು ಹಾಸನ ಜಿಲ್ಲೆಯಲ್ಲಿದೆ. ಇದರ ಮೊದಲ ಹೆಸರು ದೋರ ಸಮುದ್ರ ಮತ್ತು ಇದು ಹೊಯ್ಸಳರ ರಾಜಧಾನಿಯಾಗಿತ್ತು. ಹೊಯ್ಸಳೇಶ್ವರ ಮತ್ತು ಶಾಂತಳೇಶ್ವರ ದೇವಾಲಯಗಳು ಇಲ್ಲಿವೆ.
(7) ದೆಹಲಿ: ಯಮುನಾ ನದಿ ದಡದಲ್ಲಿರುವ ದೆಹಲಿಯು ದೆಹಲಿ ಸುಲ್ತಾನರ ರಾಜಧಾನಿಯಾಗಿದ್ದಿತ್ತಲ್ಲದೆ ಕೆಲಕಾಲ ಮೊಘಲರ ರಾಜಧಾನಿಯೂ ಆಗಿತ್ತು. ಕುತುಬ್ ಮಿನಾರ್, ಕೆಂಪುಕೋಟೆ, ಜಾಮಿ ಮಸೀದಿ ಸ್ಮಾರಕಗಳು ಇಲ್ಲಿವೆ.
(8) ದೇವಗಿರಿ: ಇದು ಮಹಾರಾಷ್ಟ್ರದಲ್ಲಿದೆ. ಅಲ್ಲಾವುದ್ದೀನ್ ಖಿಲ್ಜಿಯು ಈ ನಗರದ ಮೇಲೆ ದಂಡಯಾತ್ರೆಗಳನ್ನು ಕೈಗೊಂಡನು. ಮಹಮದ್ ಬಿನ್ ತೊಘಲಕನು ದೇವಗಿರಿಯ ಸಮೀಪ ದೌಲತಾಬಾದ್ ಎಂಬ ಹೊಸನಗರವನ್ನು ನಿರ್ಮಿಸಿದನು ಹಾಗು ತನ್ನ ರಾಜಧಾನಿಯನ್ನು ದೆಹಲಿಯಿಂದ ದೇವಗಿರಿಗೆ ಅಲ್ಪಕಾಲ ಸ್ಥಳಾಂತರಿಸಿದ್ದನು.
(9) ಪಾಣಿಪತ್: ಇದು ಹರಿಯಾಣ ರಾಜ್ಯದಲ್ಲಿದೆ. ಭಾರತದ ಇತಿಹಾಸದಲ್ಲಿ ಇದೊಂದು ಪ್ರಸಿದ್ಧ ಕದನ ಭೂಮಿಯಾಗಿದ್ದು, ಇಲ್ಲಿ ಮೂರು ಪ್ರಮುಖ ಕದನಗಳು ಜರುಗಿದವು.
(10) ಆಗ್ರಾ: ಇದು ಉತ್ತರ ಪ್ರದೇಶದಲ್ಲಿ ಯಮುನಾ ನದಿಯ ದಡದ ಮೇಲಿದೆ. ಇದನ್ನು ಸಿಕಂದರ್ ಲೋಧಿಯು ನಿರ್ಮಿಸಿದನು. ಇದು ಮೊಘಲರ ರಾಜಧಾನಿಯಾಯಿತು. ತಾಜಮಹಲ್ ಆಗ್ರಾದಲ್ಲಿನ ಅತ್ಯಂತ ಪ್ರಮುಖ ಸ್ಮಾರಕವಾಗಿದೆ.
(11) ಹಂಪಿ: ತುಂಗಭದ್ರಾ ನದಿಯ ದಡದ ಮೇಲಿರುವ ಇದು ಬಳ್ಳಾರಿ ಜಿಲ್ಲೆಯಲ್ಲಿದೆ. ಇದು ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ವಿರೂಪಾಕ್ಷ ದೇವಾಲಯ, ವಿಜಯ ವಿಠ್ಠಲ ದೇವಾಲಯ, ಕಲ್ಲಿನ ರಥ ಮುಂತಾದವು ಹಂಪಿಯ ಭವ್ಯವಾದ ಸ್ಮಾರಕಗಳಾಗಿವೆ.
(12) ಬೀದರ್: ಇದು ಬಹಮನಿ ರಾಜ್ಯದ ರಾಜಧಾನಿಯಾಗಿತ್ತು. ಮಹಮದ್ ಗವಾನ್ ನಿರ್ಮಿಸಿದ ಮದರಸ ಇಲ್ಲಿದೆ.
(13) ಬಿಜಾಪುರ(ಪ್ರಸ್ತುತ ವಿಜಯಪುರ): ಇದು ಆದಿಲ್ ಷಾಹಿಗಳ ರಾಜಧಾನಿಯಾಗಿತ್ತು. ಗೋಳಗುಮ್ಮಟ, ಇಬ್ರಾಹಿಂ ರೋಜಾ, ಅಸಾರ ಮಹಲ್, ಬಾರಾಕಮಾನ್ ಮುಂತಾದವು ಇಲ್ಲಿವೆ.
(14) ಕಲ್ಕತ್ತ: ಹೂಗ್ಲಿ ನದಿಯ ದಡದಲ್ಲಿರುವ ಇದು ಪಶ್ಚಿಮ ಬಂಗಾಳದ ರಾಜಧಾನಿ & ಭಾರತದಲ್ಲಿ ಬ್ರಿಟಿಷರ ಪ್ರಥಮ ರಾಜಧಾನಿ. ಕಲ್ಕತ್ತದ ಸಮೀಪ ಬೇಲೂರು ಎಂಬಲ್ಲಿ ಸ್ವಾಮಿ ವಿವೇಕಾನಂದರು ರಾಮಕೃಷ್ಣಮಠವನ್ನು ಸ್ಥಾಪಿಸಿದರು.
(15) ಬಾಂಬೆ: ಮಹಾರಾಷ್ಟ್ರದ ರಾಜಧಾನಿಯಾಗಿದೆ. ಇದು ಭಾರತದ ಪಶ್ಚಿಮ ತೀರದಲ್ಲಿ ಬ್ರಿಟೀಷರು ಪ್ರಮುಖ ನೆಲೆಯಾಗಿತ್ತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಮೊದಲ ಅಧಿವೇಶನ ಇಲ್ಲಿ ಜರುಗಿತು.
(16) ಪಾಂಡಿಚೆರಿ: ಇದು ಮದ್ರಾಸ್ನ ದಕ್ಷಿಣಕ್ಕೆ ಕೋರಮಂಡಲ ತೀರ ಪ್ರದೇಶದಲ್ಲಿದೆ. ಇದು ಭಾರತದಲ್ಲಿ ಫ್ರೆಂಚರ ರಾಜಧಾನಿಯಾಗಿತ್ತು.
(17) ಶ್ರೀರಂಗಪಟ್ಟಣ: ಇದು ಮಂಡ್ಯ ಜಿಲ್ಲೆಯಲ್ಲಿದೆ. ಇದು ಆರಂಭಿಕ ಮೈಸೂರು ಒಡೆಯರು, ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರ ರಾಜಧಾನಿಯಾಗಿತ್ತು. ದರಿಯಾ ದೌಲತ್ ಅರಮನೆ ಮತ್ತು ಶ್ರೀ ರಂಗನಾಥ ದೇವಾಲಯ ಇಲ್ಲಿ ಕಂಡುಬರುವ ಪ್ರಮುಖ ಸ್ಮಾರಕಗಳು.
(18)
ಮೀರತ್: ಉತ್ತರ ಪ್ರದೇಶ ರಾಜ್ಯದಲ್ಲಿದ್ದು, ದೆಹಲಿಯ ಸಮೀಪವಿದೆ. ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಕೇಂದ್ರವಾಗಿತ್ತು.
(19) ಜಲಿಯನ್ ವಾಲಾಬಾಗ್: ಇದು ಪಂಜಾಬಿನ ಅಮೃತಸರದಲ್ಲಿದೆ. ರೌಲತ್ ಕಾಯ್ದೆಯ ವಿರುದ್ಧ ಪ್ರತಿಭಟಿಸುತ್ತಿದ್ದ ನಿರಾಯುಧ ಜನರನ್ನು ಜನರಲ್ ಡಯರ್ ಎಂಬುವನು 1919ರಲ್ಲಿ ಕಗ್ಗೊಲೆಗೈದನು.
(20) ದಂಡಿ: ಇದು ಗುಜರಾತಿನ ಪಶ್ಚಿಮ ತೀರದಲ್ಲಿದೆ. ಮಹಾತ್ಮ ಗಾಂಧೀಜಿಯವರು ಉಪ್ಪಿನ ಸತ್ಯಾಗ್ರಹ ಚಳುವಳಿಯನ್ನು ಇಲ್ಲಿಂದ ಆರಂಭಿಸಿದರು.
(ಮುಂದುವರೆಯುವುದು…..)
0 Comments