* ಕರ್ನಾಟಕ ರಾಜ್ಯದ ಜಿಲ್ಲೆಗಳ ವೈಶಿಷ್ಟ್ಯಗಳು ಭಾಗ 2 – ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಅತ್ಯುಪಯುಕ್ತ




2. ಮೈಸೂರು ವಿಭಾಗದ ಜಿಲ್ಲೆಗಳ ವಿಶಿಷ್ಟತೆಗಳು 

10) ಮೈಸೂರು ಜಿಲ್ಲೆ :
* ನಮ್ಮ ರಾಜ್ಯದ ಅತ್ಯಂತ ಹಳೆಯ ವಿಶ್ವವಿದ್ಯಾಲಯ ಎಂಬ ಕೀರ್ತಿ ಮೈಸೂರು ವಿಶ್ವವಿದ್ಯಾಲಯಕ್ಕಿದೆ.
* ಈ ಜಿಲ್ಲೆಯ ಸೋಮನಾಥಪುರ, ನಂಜನಗೂಡು, ತಲಕಾಡು, ಬೆಟ್ಟದೂರಿನ ಗೊಮ್ಮಟಗಿರಿ, ಖಾದಿ ಮತ್ತು ಗುಡಿ ಕೈಗಾರಿಕೆಗೆ ಹೆಸರುವಾಸಿಯಾಗಿದ್ದ ಬದನವಾಳು ಮುಂತಾದವು ಪ್ರವಾಸಿಗರನ್ನು ದೇಶ- ವಿದೇಶಗಳಿಂದ ಆಕರ್ಷಿಸುತ್ತವೆ.
* ಇಲ್ಲಿ ರೈಲು ವಸ್ತು ಸಂಗ್ರಹಾಲಯವಿದೆ.
* ಏಷ್ಯಾ ಖಂಡದಲ್ಲೇ ದೊಡ್ಡದು ಎನ್ನಲಾದ ಜಾನಪದ ವಸ್ತುಸಂಗ್ರಹಾಲಯ ಇಲ್ಲಿದೆ.
* ಈ ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಬೈಲುಕುಪ್ಪೆ ಎಂಬಲ್ಲಿ ಟಿಬೆಟ್ಟಿಯನ್ನರ ಪುನರ್ವಸತಿ ಕೇಂದ್ರವಿದೆ. ಇಲ್ಲಿ ಅತ್ಯಂತ ಆಕರ್ಷಣೀಯವಾದ ಬುದ್ಧ ದೇವಾಲಯಗಳಿವೆ.
* ನಮ್ಮ ರಾಜ್ಯವನ್ನು 1973ರವರೆಗೆ ಮೈಸೂರು ರಾಜ್ಯ ಎಂದು ಕರೆಯಲಾಗುತ್ತಿತ್ತು.


11) ಚಾಮರಾಜನಗರ ಜಿಲ್ಲೆ :
* ಇದಕ್ಕೆ ಪ್ರಾಚೀನಕಾಲದಲ್ಲಿ ಅರಿಕುಠಾರ ಎಂಬ ಹೆಸರಿತ್ತು.
* ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ತಂದೆ ಚಾಮರಾಜ ಒಡೆಯರ್ ಅವರ ನೆನಪಿಗೆ ಇದನ್ನು ಚಾಮರಾಜನಗರ ಎಂದು ನಾಮಕರಣ ಮಾಡಿದರು. ಇಲ್ಲಿ ಚಾಮರಾಜೇಶ್ವರ ಎಂಬ ಹೆಸರಿನ ಪ್ರಸಿದ್ಧ ದೇವಾಲಯವನ್ನು ಕಟ್ಟಿಸಿದರು.
* ಈ ಜಿಲ್ಲೆಯು ಹಿಪ್ಪುನೇರಳೆ ಸೊಪ್ಪಿನ ಕೃಷಿಗೆ ಮತ್ತು ರೇಷ್ಮೆ ಗೂಡು ಉತ್ಪಾದನೆಗೆ ಹೆಸರುವಾಸಿಯಾಗಿತ್ತು.
* ಈ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನವಿದೆ.
* ಬಿಳಿಗಿರಿರಂಗನಬೆಟ್ಟವೆಂಬ ವನ್ಯಮೃಗಗಳ ಧಾಮ ಇಲ್ಲಿ ಇದೆ. ಇದು ಆನೆಗಳ ವಾಸಸ್ಥಳದ ಪ್ರಮುಖ ಕ್ಷೇತ್ರವಾಗಿದೆ.
* ಹರದನಹಳ್ಳಿಯಲ್ಲಿ ಲಿಂಗಾಯತ ಸಾಧಕರ ಗದ್ದುಗೆಗಳಿವೆ.
* ಈ ಜಿಲ್ಲೆಯ ಪ್ರಮುಖ ತಾಲ್ಲೂಕಾದ ಕೊಳ್ಳೆಗಾಲವು ರೇಷ್ಮೆ ನೇಯ್ಗೆಗೆ ಹೆಸರುವಾಸಿಯಾಗಿದೆ.
* ಈ ತಾಲ್ಲೂಕಿನ ಚಿಕ್ಕಲೂರಿನಲ್ಲಿ ಸಿದ್ದಪ್ಪಾಜಿ ಅವರ ಗದ್ದುಗೆ ಮತ್ತು ಯಳಂದೂರಿನಲ್ಲಿ ಕನ್ನಡದ ಪ್ರಸಿದ್ಧ ಕವಿ ಷಡಕ್ಷರದೇವನ ಗದ್ದುಗೆಯಿದೆ.
* ಇಲ್ಲಿ ಪ್ರಸಿದ್ಧ ಹೊಗೇನಕಲ್ಲು ಜಲಪಾತವಿದೆ.


12) ಹಾಸನ ಜಿಲ್ಲೆ :
* ಹಾಸನಾಂಬ ದೇವಾಲಯದಿಂದ ಇದಕ್ಕೆ ಹಾಸನ ಎಂಬ ಹೆಸರು ಬಂದಿದೆ. ಈ ದೇವಾಲಯದ ಗರ್ಭಗುಡಿ ಬಾಗಿಲನ್ನು ವರ್ಷದಲ್ಲಿ ಒಮ್ಮೆ ಮಾತ್ರ ತೆರೆಯಲಾಗುತ್ತದೆ.
* ಈ ಜಿಲ್ಲೆಯಲ್ಲಿ ದೇವಾಲಯಗಳು ಹೊಯ್ಸಳ ವಾಸ್ತು ಶಿಲ್ಪಕ್ಕೆ ಹೆಸರುವಾಸಿಯಾಗಿವೆ.
* ಯಗಚಿ ನದಿ ದಂಡೆಯಲ್ಲಿರುವ ಬೇಲೂರಿನಲ್ಲಿ ಪ್ರಸಿದ್ಧ ಚನ್ನಕೇಶವ ದೇವಾಲಯವಿದೆ. ಕುಸುರಿ ಕೆತ್ತನೆಗೆ ಇದು ಹೆಸರುವಾಸಿಯಾಗಿದೆ. ಇದನ್ನು ವೇಲಾಪುರಿ ಎಂದು ಕರೆಯಲಾಗುತ್ತಿತ್ತು.
* ಹಳೆಬೀಡಿನಲ್ಲಿ ಕೇದಾರೇಶ್ವರ ಮತ್ತು ಹೊಯ್ಸಳೇಶ್ವರ ದೇವಾಲಯಗಳಿವೆ. ಈ ದೇವಾಲಯಗಳಿಗೆ ಒಂದು ಸಾವಿರ ವರ್ಷಗಳ ಚರಿತ್ರೆಯಿದೆ. ಈ ಸ್ಥಳವನ್ನು ದ್ವಾರಸಮುದ್ರ ಎಂದು ಕರೆಯುತ್ತಿದ್ದರು.
* ಶ್ರವಣಬೆಳಗೊಳದಲ್ಲಿ 1000 ಸಾವಿರ ವರ್ಷಗಳ ಹಿಂದೆ ನಿರ್ಮಿಸಿರುವ ಪ್ರಸಿದ್ಧ ಏಕಶಿಲಾ ಬಾಹುಬಲಿ ಮೂರ್ತಿಯಿದೆ. ಇದರ ಎತ್ತರ 58 ಅಡಿಗಳು. ಹೆಚ್.ಡಿ. ದೇವೇಗೌಡ ಹನ್ನೆರಡು ವರ್ಷಗಳಿಗೊಮ್ಮೆ ಇಲ್ಲಿ ಬಾಹುಬಲಿ ವಿಗ್ರಹಕ್ಕೆ ಮಹಾಮಸ್ತಕಾಭಿಷೇಕ ನಡೆಯುತ್ತದೆ.
* ಹಾಸನ- ಮಂಗಳೂರು ನಡುವಿನ ರೈಲು ಮಾರ್ಗದಲ್ಲಿ 58 ಸುರಂಗಗಳಿವೆ. ಈ ರೈಲು ಮಾರ್ಗದಲ್ಲಿ ಯಾತ್ರೆ ಮಾಡುವುದು ಒಂದು ಸಾಹಸ ಯಾತ್ರೆಯಾಗುತ್ತದೆ. 


13) ಚಿಕ್ಕಮಗಳೂರು ಜಿಲ್ಲೆ :
ಆದಿಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಶಾರದಾದೇವಿ ದೇವಾಲಯ ಶೃಂಗೇರಿಯಲ್ಲಿದೆ. ಇದು ತುಂಗಾ ನದಿಯ ದಂಡೆಯಲ್ಲಿದೆ.
* ಜಿಲ್ಲೆಯಲ್ಲಿ ಭದ್ರಾ ವನ್ಯಮೃಗ ಧಾಮವಿದೆ. ಇದನ್ನು ಮುತ್ತೋಡಿ ಪ್ರಾಣಿಧಾಮ ಎಂದೂ ಕರೆಯಲಾಗುತ್ತದೆ. ಇದಲ್ಲದೆ ಉಳಿವಿ ಪಕ್ಷಿಧಾಮವಿದೆ.
* ಇಲ್ಲಿ 19ನೆಯ ಶತಮಾನದಲ್ಲಿ ನಿರ್ಮಿಸಲಾದ ಸೇಂಟ್ ಆಂಡ್ರೂಸ್ ಚರ್ಚ್ ಇದೆ.
* ಕೆಮ್ಮಣ್ಣುಗುಂಡಿಯ ನಿತ್ಯಹರಿದ್ವರ್ಣ ಕಾಡಿನಿಂದ ಕೂಡಿದ ಪ್ರದೇಶ ಇದಾಗಿದೆ. ನಾಲ್ವಡಿ ಕೃಷರಾಜ ಒಡೆಯರ್ ಅವರು ಇಲ್ಲಿ ಬೇಸಿಗೆಯಲ್ಲಿ ತಂಗಲು ಬಂಗಲೆ ಕಟ್ಟಿಸಿದ್ದಾರೆ.
* ಅಬ್ಬೆ ಜಲಪಾತ, ಮುಳ್ಳಯ್ಯನಗಿರಿ, ಕಲ್ಹತ್ತಗಿರಿ ಮುಂತಾದ ಪ್ರಕೃತಿ ರಮ್ಯ ತಾಣಗಳು ಇಲ್ಲಿವೆ. ಇಲ್ಲಿ 1500ಕ್ಕೂ ಮಿಕ್ಕಿದ ವೈವಿದ್ಯಮಯ ಗುಲಾಬಿ ಹೂವಿನ ತೋಟವಿದೆ. ಇದೊಂದು ಸಾಹಸ ಕ್ರೀಡೆಗಳ ಕೇಂದ್ರವಾಗಿದೆ.
* ಪಶ್ಚಿಮಟ್ಟ ಪ್ರದೇಶದಲ್ಲಿರುವ ಬಾಬಾಬುಡನ್ಗಿರಿಯನ್ನು ಚಂದ್ರದ್ರೋಣ ಪರ್ವತ ಎಂದೂ ಕರೆಯಲಾಗುತ್ತದೆ.
* ಸೂಫಿಸಂತ ಬಾಬಾಬುಡನ್ ದರ್ಗಾ ಇಲ್ಲಿದೆ. ಅವನು ಭಾರತಕ್ಕೆ ಕಾಫಿ ಪರಿಚಯಿಸಿದ ಎಂದು ಹೇಳಲಾಗುತ್ತದೆ.
* ಕನ್ನಡದ ಪ್ರಸಿದ್ಧ ಕವಿ ಲಕ್ಷ್ಮೀಶ ಹುಟ್ಟಿದ ದೇವನೂರು ಈ ಜಿಲ್ಲೆಯಲ್ಲಿದೆ. ಇವನು ಬರೆದ ಜೈಮಿನಿ ಭಾರತ ಕನ್ನಡದ ಪ್ರಸಿದ್ಧ ಕೃತಿಯಾಗಿದೆ.
* ಈ ಜಿಲ್ಲೆಯ ಪರ್ವತಗಳಿಂದ ತುಂಗಭದ್ರ, ಹೇಮಾವತಿ, ನೇತ್ರಾವತಿ ಮತ್ತು ವೇದಾವತಿ ನದಿಗಳು ಹುಟ್ಟುತ್ತವೆ. 


14) ಮಂಡ್ಯ ಜಿಲ್ಲೆ :
* ಮೈಸೂರು ಜಿಲ್ಲೆಯನ್ನು ವಿಭಜಿಸಿ 1938ರಲ್ಲಿ ಮಂಡ್ಯ ಜಿಲ್ಲೆಯನ್ನು ರಚಿಸಲಾಯಿತು.
* ಮಾಂಡವ್ಯ ಋಷಿಯು ಇಲ್ಲಿ ತಪಸ್ಸು ಮಾಡಿದ್ದ ಎಂದು ಹೇಳಲಾಗುತ್ತದೆ. ಆದ್ದರಿಂದ ಇದಕ್ಕೆ ಮಂಡ್ಯ ಎನ್ನುವ ಹೆಸರು ಬಂದಿದೆ.
* ಭಾರತದಲ್ಲಿ ಅತಿ ದೊಡ್ಡ ಸಕ್ಕರೆ ಕಾರ್ಖಾನೆ ಇಲ್ಲಿ 1933ರಲ್ಲಿ ಆರಂಭವಾಯಿತು.
* ಕೃಷಿಯನ್ನು ಪ್ರೋತ್ಸಾಹಿಸಲು ಸರ್ಕಾರವು ಗುಂಡಲು ಎಂಬಲ್ಲಿ 1951ರಲ್ಲಿ ಕೃಷಿ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿದೆ. ಶಿವಳ್ಳಿ ಎಂಬಲ್ಲಿ ಬೀಜೋತ್ಪಾದನೆ ಕೇಂದ್ರವಿದೆ.
* ಈ ಜಿಲ್ಲೆಯ ಶ್ರೀರಂಗಪಟ್ಟಣವು ಬ್ರಿಟಿಷರು ಇದನ್ನು 1799ರಲ್ಲಿ ತಮ್ಮ ವಶಪಡಿಸಿಕೊಳ್ಳುವವರೆಗೆ ಇದು ಒಡೆಯರ್ ಅರಸರ ರಾಜಧಾನಿಯಾಗಿತ್ತು.
* ಟಿಪ್ಪು ಸುಲ್ತಾನ್ ಕಟ್ಟಿಸಿದ ಅನೇಕ ಮಸೀದಿ, ಕೋಟೆಗಳು, ಮದ್ದುಗುಂಡುಗಳ ಕೋಠಿ ಮುಂತಾದವು ಇಲ್ಲಿವೆ.
* ಈ ಪಟ್ಟಣವು ಕಾವೇರಿ ನದಿಯ ದಂಡೆಯಲ್ಲಿದೆ.
* ಕಾವೇರಿ ನದಿಯು ಉಂಟು ಮಾಡಿರುವ 3 ದ್ವೀಪಗಳಲ್ಲಿ ಮೂರು ಶ್ರೀರಂಗನಾಥಸ್ವಾಮಿ ದೇವಾಲಯಗಳಿವೆ. ಮೊದಲನೆಯದು ಶ್ರೀರಂಗಪಟ್ಟಣ, ಎರಡನೆಯದು ಶಿವನಸಮುದ್ರದಲ್ಲಿನ ಶ್ರೀರಂಗನಾಥಸ್ವಾಮಿ ದೇವಾಲಯ. ಮೂರನೆಯದು ತಮಿಳುನಾಡಿನಲ್ಲಿರುವ ಶ್ರೀರಂಗಂದಲ್ಲಿನ ಶ್ರೀರಂಗನಾಥಸ್ವಾಮಿ ದೇವಾಲಯ.
* ಗಂಜಾಮ್ ಎಂಬಲ್ಲಿ ಫ್ರೆಂಚ್ ಪ್ರವಾಸಿ ಅಬ್ಬೆ ದುಬಾಯಿ ಕಟ್ಟಿಸಿದ ಚರ್ಚ್ ಇದೆ. ಈ ಊರು ಎತ್ತಿನ ಬಂಡಿಗಳನ್ನು ತಯಾರಿಸುವ ಕೇಂದ್ರವಾಗಿದೆ.
* ಈ ಜಿಲ್ಲೆಯ ಇತರೆ ಪ್ರಮುಖ ಕೇಂದ್ರಗಳೆಂದರೆ ಮಂಟೆಸ್ವಾಮಿ ಗದ್ದಿಗೆಯಿರುವ ಬೊಪ್ಪಗೌಡನಪುರ, ರಂಗನತಿಟ್ಟು ಪಕ್ಷಿಧಾಮ, ಪಾಂಡವಪುರ, ಮೇಲುಕೋಟೆ, ಗಗನಚುಕ್ಕಿ-ಭರಚುಕ್ಕಿ ಜಲಪಾತಗಳಿರುವ ಶಿವನಸಮುದ್ರ, ಚುಂಚನಗಿರಿ ಮುಂತಾದವು.
* ಮೇಲುಕೋಟೆಯಲ್ಲಿ 1854ರಲ್ಲಿ ಸ್ಥಾಪಿಸಿರುವ ಸಂಸ್ಕೃತ ಪಾಠಶಾಲೆಯಿದೆ. ಇಲ್ಲಿ ಪರಕಾಲ ಮಠ, ಅಹೋಬಲ ಮಠ ಮತ್ತು ಯತಿರಾಜಮಠಗಳಿವೆ.
* ಮಂಡ್ಯ ಜಿಲ್ಲೆಯ ಅಭಿವೃದ್ಧಿಯ ಜೀವದ್ರವ್ಯ ಕೃಷ್ಣರಾಜಸಾಗರ ಅಣೆಕಟ್ಟು. ಕಾವೇರಿ ನದಿಗೆ ಅಡ್ಡವಾಗಿ ನಿರ್ಮಿಸಿರುವ ಈ ಅಣೆಕಟ್ಟೆಯು ಮಂಡ್ಯ ಮತ್ತು ಮೈಸೂರು ಜಿಲ್ಲೆಗಳ ಕೃಷಿಗೆ ನೀರನ್ನು ಒದಗಿಸುತ್ತದೆ. ಇದನ್ನು ಸರ್.ಎಂ.ವಿಶ್ವೇಶ್ವರಯ್ಯ ಅವರ ಮಾರ್ಗದರ್ಶನದಲ್ಲಿ ನಿರ್ಮಿಸಲಾಯಿತು. ಇದರ ನಿರ್ಮಾಣಕ್ಕೆ ಕಾರಣಕರ್ತರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರನ್ನು ಇದಕ್ಕೆ ಇಡಲಾಗಿದೆ. ಇದನ್ನು 1932ರಲ್ಲಿ ನಿರ್ಮಿಸಲಾಯಿತು. ಮೈಸೂರು ಮತ್ತು ಬೆಂಗಳೂರು ನಗರಗಳಿಗೆ ಕುಡಿಯುವ ನೀರನ್ನು ಇಲ್ಲಿಂದ ಸರಬರಾಜು ಮಾಡಲಾಗುತ್ತದೆ. ಇಲ್ಲಿಂದ ಮುಂದೆ ಹರಿದು ಹೋಗುವ ಕಾವೇರಿ ನದಿಗೆ ತಮಿಳುನಾಡಿನಲ್ಲಿ ಸೇಲಮ್ ಬಳಿ ಮೆಟ್ಟೂರು ಅಣೆಕಟ್ಟೆಯನ್ನು ನಿರ್ಮಿಸಲಾಗಿದೆ. 


15) ಕೊಡಗು ಜಿಲ್ಲೆ :
* ಕರ್ನಾಟಕದ ಕಾಶ್ಮೀರ ಎಂದು ಇದಕ್ಕೆ ಪ್ರಸಿದ್ಧಿಯಿದೆ. ಕೆಳದಿ ನಾಯಕರ ಅಳ್ವಿಕೆಯು ಪತನವಾದ ನಂತರ ಇಲ್ಲಿ ಹಾಲೇರಿ ಅರಸರು 1600 ರಿಂದ 1834ರವರೆಗೆ ಆಡಳಿತ ನಡೆಸುತ್ತಾರೆ.
* ಬ್ರಿಟಿಷರು 1834ರಲ್ಲಿ ಕೊಡಗನ್ನು ತಮ್ಮ ವಶಕ್ಕೆ ಪಡೆಯುತ್ತಾರೆ. ಇದು 1956ರಲ್ಲಿ ಕರ್ನಾಟಕದಲ್ಲಿ ವಿಲೀನಗೊಂಡಿತು.
* ಸುಗ್ಗಿಯ ಸಂದರ್ಭದಲ್ಲಿ ಹುತ್ತರಿ ಹಬ್ಬವನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಲಾಗುತ್ತದೆ.
* ಇಲ್ಲಿನ ಕಾವೇರಿ ನದಿಯ ಉಗಮ ಸ್ಥಾನವಾದ ತಲಕಾವೇರಿ, ಅಬ್ಬೆ ಜಲಪಾತ, ಇರ್ಪು ಜಲಪಾತ, ದುಬಾರೆ ಆನೆ ಪಳಗಿಸುವ ಕೇಂದ್ರ, ನಾಗರಹೊಳೆ ಮುಂತಾದವು ಪ್ರಮುಖ ಪ್ರವಾಸಿ ಕೇಂದ್ರಗಳು.
* ದೇಶದಲ್ಲಿ ಚಿಕ್ಕಮಗಳೂರನ್ನು ಬಿಟ್ಟರೆ ಅತಿ ಹೆಚ್ಚು ಕಾಫಿ ಬೆಳೆಯುವ ಜಿಲ್ಲೆ ಕೊಡಗು.
* ಕರ್ನಾಟಕ ರಾಜ್ಯದಲ್ಲಿನ ಅತಿ ಚಿಕ್ಕ ಜಿಲ್ಲೆ ಕೊಡಗು. ಇಲ್ಲಿ 3 ತಾಲ್ಲೂಕುಗಳಿವೆ.
* ಈ ಜಿಲ್ಲೆಯಲ್ಲಿ ಅಪಾರ ಸಂಖ್ಯೆಯ ಕೊಡವರು, ಕುಡಿಯ, ಮಲೆಕುಡಿಯ ಮುಂತಾದ ಬುಡಕಟ್ಟು ಜನರು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಿದ್ದಾರೆ. 


16) ದಕ್ಷಿಣ ಕನ್ನಡ ಜಿಲ್ಲೆ :
ಇದು ಕರ್ನಾಟಕದ ಪ್ರಸಿದ್ಧ ಕರಾವಳಿ ಜಿಲ್ಲೆ. ಮೀನುಗಾರಿಕೆ, ಬೀಡಿ ಕಟ್ಟುವುದು, ಗೋಡಂಬಿ ಸಂಸ್ಕರಣ, ಕೃಷಿ ಇಲ್ಲಿನ ಜನರ ಮುಖ್ಯ ಉದ್ಯೋಗ.
* ಬ್ರಿಟಿಷರು 1860ರಲ್ಲಿ ಕೆನರ ಪ್ರದೇಶವನ್ನು ವಿಭಜಿಸಿ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಎಂಬ ಜಿಲ್ಲೆಗಳನ್ನು ರಚಿಸಿದರು. ದಕ್ಷಿಣಕನ್ನಡ ಜಿಲ್ಲೆಯು ಮದರಾಸು ಪ್ರಾಂತದಲ್ಲಿ ಉಳಿಯಿತು. ಉತ್ತರ ಕನ್ನಡ ಜಿಲ್ಲೆಯ ಆಡಳಿತವನ್ನು ಬಾಂಬೆ ಪ್ರಾಂತಕ್ಕೆ ವರ್ಗಾಯಿಸಲಾಯಿತು.
* ಮಂಗಳೂರಿನ ಬಜ್ಪೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ.
* ನೇತ್ರಾವತಿ, ಪಯಸ್ವಿನಿ, ಕುಮಾರಧಾರಾ- ಜಿಲ್ಲೆಯಲ್ಲಿ ಹರಿಯುವ ಪ್ರಮುಖ ನದಿಗಳು.
* ವೇಣೂರಿನಲ್ಲಿ ಏಕಶಿಲಾ ಗೊಮ್ಮಟೇಶ್ವರನ ವಿಗ್ರಹ, ಕದ್ರಿಯಲ್ಲಿ ಶ್ರೀ ಮಂಜುನಾಥ, ಮೂಡಬಿದಿರೆಯಲ್ಲಿ ಜೈನರ ಸಾವಿರ ಕಂಬಗಳ ಬಸದಿ, ಧರ್ಮಸ್ಥಳ ಮಂಜುನಾಥ, ಕಟೀಲಿನ ದುರ್ಗಾ ಪರಮೇಶ್ವರಿ, ಕುದ್ರೋಳಿಯ ಗೋಕರ್ಣನಾಥೇಶ್ವರ ದೇವಾಲಯಗಳಿವೆ.
* ಪಿಲಿಕುಳ ನಿಸರ್ಗಧಾಮವು ಇದು ಸುಮಾರು 350ಕ್ಕಿಂತಲೂ ಅಧಿಕ ಪ್ರದೇಶದಲ್ಲಿ ನೆಲೆಗೊಂಡಿದೆ. ಇಲ್ಲಿ ಡಾ. ಶಿವರಾಮಕಾರಂತ ಜೈವಿಕ ಉದ್ಯಾನವಿದೆ.
* ಈ ಜಿಲ್ಲೆಯು ಸಾಂಪ್ರದಾಯಿಕ ನಾಗಾರಾಧನೆ, ಕಂಬಳ, ಭೂತಕೋಲ ಮುಂತಾದ ಆಚರಣೆಗಳಿಗೆ ಪ್ರಸಿದ್ಧವಾಗಿದೆ. 


17) ಉಡುಪಿ ಜಿಲ್ಲೆ :
* ದಕ್ಷಿಣ ಕನ್ನಡ ಜಿಲ್ಲೆಯನ್ನು ವಿಭಜಿಸಿ 1997ರಲ್ಲಿ ಉಡುಪಿ ಜಿಲ್ಲೆಯನ್ನು ರಚಿಸಲಾಯಿತು.
* ಈ ಜಿಲ್ಲೆಯ ಪಶ್ಚಿಮಕ್ಕೆ ಅರಬ್ಬಿ ಸಮದ್ರವಿದ್ದರೆ ಪೂರ್ವಕ್ಕೆ ಪಶ್ಚಿಮಟ್ಟ ಪರ್ವತಶ್ರೇಣಿಯಿದೆ.
* ಧ್ವೈತ ಸಿದ್ಧಾಂತದ ಪ್ರತಿಪಾದಕ ಮಧ್ವಾಚಾರ್ಯರಿಂದ ಇಲ್ಲಿ ಶ್ರೀಕೃಷ್ಣನ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು ಎಂದು ಹೇಳಲಾಗುತ್ತದೆ.
* ಪ್ರಸಿದ್ಧ ಸಂತ ಕನಕದಾಸನಿಗೆ ಪೂರ್ವದಿಂದ ಪಶ್ಚಿಮಕ್ಕೆ ತಿರುಗಿ ಶ್ರೀಕೃಷ್ಣ ದರ್ಶನ ನೀಡಿದ್ದ ಸ್ಥಳವನ್ನು ಕನಕನ ಕಿಂಡಿ ಎಂದು ಕರೆಯಲಾಗುತ್ತದೆ.
* ಕೊಡಚಾದ್ರಿ ಬೆಟ್ಟದ ಮೇಲೆ ಮೂಕಾಂಬಿಕ ದೇವಾಲಯವಿದೆ. ಕಾರ್ಕಳದಲ್ಲಿನ 42 ಅಡಿ ಎತ್ತರದ ಗೊಮ್ಮಟೇಶ್ವರ ವಿಗ್ರಹವು ಲೋಕ ಪ್ರಸಿದ್ಧ ಪಡೆದಿದೆ.
* ಉಡುಪಿಯಲ್ಲಿ ರಾಷ್ಟ್ರಕವಿ ಗೋವಿಂದ ಪೈಗಳ ಸಂಶೋಧನ ಕೇಂದ್ರವಿದೆ.
* ಮಣಿಪಾಲ ಶೈಕ್ಷಣಿಕ ಕೇಂದ್ರವಾಗಿ ಬೆಳೆಯುತ್ತಿದೆ. ಬಸರೂರು ಎಂಬುದು ಪ್ರಸಿದ್ಧ ರೇವು ಪಟ್ಟಣವಾಗಿತ್ತು.
* ಡಚ್ ಮತ್ತು ಪೋರ್ಚುಗೀಸರು ಇಲ್ಲಿ ವ್ಯಾಪಾರ ಮಾಡುತ್ತಿದ್ದರು.





* ಮಲ್ಪೆಯು ಸರ್ವಋತು ಮೀನುಗಾರಿಕೆ ಬಂದರಾಗಿದೆ. ಇಲ್ಲಿರುವ ಪ್ರಸಿದ್ಧ ದ್ವೀಪವನ್ನು ಸೇಂಟ್ ಮೇರಿ ದ್ವೀಪ ಎಂದು ಕರೆಯಲಾಗುತ್ತದೆ.

Post a Comment

0 Comments