⚫ Archaeological Citations- ಪ್ರಾಕ್ತನ-ಪುರಾತತ್ವ ಆಧಾರಗಳು

 

ಮುಂದುವರೆದ ಭಾಗ……

2) ಪ್ರಾಕ್ತನ/ಪುರಾತತ್ವ ಆಧಾರಗಳು:

ಹಿಂದಿನ ಮಾನವರು ನಿರ್ಮಿಸಿದ ಮತ್ತು ಬಳಸಿದ ಭೌತಿಕ ವಸ್ತುಗಳ ಅವಶೇಷಗಳೇ  ಪುರಾತತ್ವ ಆಧಾರಗಳು. ಭೂಮಿಯ ಒಳಗೆ ಹುದುಗಿ ಹೋಗಿರುವ ಅವಶೇಷಗಳನ್ನು ಉತ್ಖನನದ ಮೂಲಕ ಹೊರತೆಗೆಯಲಾಗುವುದು. ಪುರಾತತ್ವ ಆಧಾರಗಳ ವ್ಯಾಪ್ತಿಗೆ ಮಡಕೆ ಚೂರುಗಳು, ನಾಣ್ಯಗಳು, ಶಾಸನಗಳು, ಸ್ಮಾರಕಗಳು ಮತ್ತಿತರ ಅವಶೇಷಗಳು ಒಳಪಡುತ್ತವೆ.

ಲಿಖಿತ ಮೂಲಾಧಾರಗಳಿಲ್ಲದ ಸಂದರ್ಭಗಳಲ್ಲಿ ಪ್ರಾಕ್ತನ ಅಥವಾ ಪುರಾತತ್ವ ಮೂಲಾಧಾರಗಳು ಏಕಮಾತ್ರ ಆಧಾರಗಳಾಗುತ್ತವೆ. ನಾಣ್ಯಗಳು, ಮುದ್ರೆಗಳು, ಆಭರಣಗಳು, ಸಲಕರಣೆಗಳು, ಶಾಸನಗಳು, ಕಟ್ಟಡಗಳ ಅವಶೇಷಗಳು, ಮಡಕೆಗಳು, ಗೃಹೋಪಯೋಗಿ ವಸ್ತುಗಳು, ಜೇಡಿಮಣ್ಣಿನ ಮೂರ್ತಿಗಳು, ಪಳಿಯುಳಿಕೆಗಳು, ಆಯುಧಗಳು, ಚಿತ್ರಗಳು, ಮುಂತಾದವುಗಳು ಪ್ರಮುಖ ಪುರಾತತ್ವ ಮೂಲಾಧಾರಗಳಾಗಿವೆ.

 ಉತ್ಖನನಗಳು:

ಮೂಲಾಧಾರಗಳನ್ನು ಹೆಕ್ಕಿ ತೆಗೆಯಲು ಕೈಗೊಳ್ಳುವ ವೈಜ್ಞಾನಿಕ ಭೂ ಅಗೆತವನ್ನು ಉತ್ಖನನ ಎಂದು ಕರೆಯುತ್ತೇವೆ. ಭಾರತದ ಇತಿಹಾಸಪೂರ್ವಕಾಲವನ್ನು ಉತ್ಖನನಗಳ ಆಧಾರದಿಂದಲೇ ಬರೆಯಲಾಗಿದೆ. ಸಿಂಧೂ ನಾಗರಿಕತೆಯ ಅಧ್ಯಯನಕ್ಕೆ ಇವು ಏಕಮಾತ್ರ ಆಧಾರಗಳಾಗಿವೆ. ಚಂದ್ರಗಿರಿ, ತಿರುನೆಲ್ವೇಲಿ, ಮಧುರೈ, ಅರ್ಕೆಮೇಡು ಮುಂತಾದ ಕಡೆಗಳಲ್ಲಿ ಕೈಗೊಂಡ ಉತ್ಖನನಗಳು ಶಿಲಾಯುಗ ಸಂಸ್ಕೃತಿಯ ಬಗ್ಗೆ ಮಾಹಿತಿ ನೀಡುತ್ತವೆ. ಅಂಕುರವಾಟ್ (ಕಾಂಬೋಡಿಯಾ), ಬೋರೋಬುದುರ್ (ಜಾವಾ), ತಕ್ಷಶಿಲಾ, ಗಯಾ, ಪಾಟಲಿಪುತ್ರ, ಹಂಪಿ ಮುಂತಾದೆಡೆಗಳಲ್ಲಿ ಕೈಗೊಂಡ ಉತ್ಖನನಗಳು ಅಂದಿನಕಾಲದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ವಿಚಾರಗಳ ಕುರಿತು ಮಾಹಿತಿ ನೀಡುತ್ತವೆ. ಉತ್ಖನನ ಸಂದರ್ಭದಲ್ಲಿ ದೊರೆತ ಪುರಾತತ್ವ ಪಳಿಯುಳಿಕೆಗಳನ್ನು ಕಾರ್ಬನ್ 14 ಮತ್ತು ಪೋಟ್ಯಾಷಿಯಂ ವಿಧಾನಗಳಿಂದ ವೈಜ್ಞಾನಿಕ ಪರೀಕ್ಷೆಗೊಳಪಡಿಸಿ ಅವುಗಳ ಕಾಲ ಮತ್ತು ಪ್ರಾಚೀನತೆಯನ್ನು ನಿರ್ಧರಿಸಲಾಗುತ್ತದೆ.

* ಉತ್ಖನನ ಎಂದರೆ ಮಾನವನ ಪ್ರಾಚೀನ ಅವಶೇಷ ಅಥವಾ ಪಸೆಯುಳಿಕೆಗಳನ್ನು ಹೊರತೆಗೆಯಲು ನಡೆಸುವ ವೈಜ್ಞಾನಿಕವಾದ ಭೂ ಅಗೆತ.

* ಬ್ರಶ್, ಕರಣೆ, ಚಾಕು, ಮರದ ದಬ್ಬಳದಂತಹ ಮೊನಚಾದ ಸಾಧನಗಳನ್ನು ಬಳಸಿ ನಿಧಾನವಾಗಿ ಮಣ್ಣಿನ ಪದರ, ಪದರಗಳನ್ನು ಸರಿಸುತ್ತಾರೆ.

* ಆ ಮಣ್ಣಿನಲ್ಲಿ ಸಿಗುವ ಮಡಕೆ ಚೂರು, ನಾಣ್ಯ, ಮಣಿ, ಹರಳು, ಎಲುಬು ಮುಂತಾದ ಅವಶೇಷಗಳನ್ನು  ಹೊರ ತೆಗೆದು ಅಧ್ಯಯನಕ್ಕೆ ಒಳಪಡಿಸುತ್ತಾರೆ.

 ಪುರಾತತ್ವ ಆಧಾರಗಳನ್ನು 4 ವಿಧಗಳಲ್ಲಿ ವರ್ಗೀಕರಿಸಲಾಗಿದೆ.

1. ಶಾಸನಗಳು 2. ನಾಣ್ಯಗಳು 3. ಸ್ಮಾರಕಗಳು 4. ಇತರೆ ಅವಶೇಷಗಳು.

 1) ಶಾಸನಗಳು:

ಶಾಸನ ಎಂದರೆ ಕೊರೆಯಲ್ಪಟ್ಟಿರುವ ಎಂದರ್ಥ. * ಕಲ್ಲು, ಬಂಡೆ, ಲೋಹ, ದಂತ, ಸುಟ್ಟ ಮಣ್ಣಿನ ಹಲಗೆ ಮೊದಲಾದ ದೀರ್ಘಕಾಲ ಬಾಳಿಕೆ ಬರುವ ವಸ್ತುಗಳ ಮೇಲೆ ಶಾಸನಗಳನ್ನು ಬರೆಯಲಾಗುತ್ತಿತ್ತು. * ಅಂದಿನ ಘಟನೆಗಳ ಜೊತೆಗೆ ನೇರ ಸಂಬAಧಗಳನ್ನು ಹೊಂದಿರುವುದರಿAದ ಶಾಸನಗಳು ಹೆಚ್ಚು ವಿಶ್ವಾಸಾರ್ಹ ಆಧಾರಗಳಾಗಿವೆ. * ಅಶೋಕನ ಶಾಸನಗಳೇ ಭಾರತದಲ್ಲಿ ಕಂಡುಬರುವ ಆರಂಭಿಕ ಶಾಸನಗಳಾಗಿವೆ. ಅಶೋಕನ ಬಹುತೇಕ ಶಾಸನಗಳು ಬ್ರಾಹ್ಮಿ ಲಿಪಿಯಲ್ಲಿದ್ದು, ಪ್ರಾಕೃತ ಭಾಷೆಯಲ್ಲಿವೆ. * ಸಮುದ್ರಗುಪ್ತನ-ಅಲಹಾಬಾದ್ ಸ್ತಂಭಶಾಸನ, ಇಮ್ಮಡಿ ಪುಲಿಕೇಶಿಯ-ಐಹೊಳೆ ಶಾಸನ, ಖಾರವೇಲನ-ಹಾಥಿಗುಂಪ ಶಾಸನ ಮೊದಲಾದವುಗಳು ಅವರ ಸೈನಿಕ ಸಾಧನೆಗಳನ್ನು ವಿವರಿಸುತ್ತವೆ.

* ಉತ್ತರಮೇರೂರಿನ ಶಾಸನ ಚೋಳರ ಗ್ರಾಮಾಡಳಿತವನ್ನು ತಿಳಿಸುತ್ತದೆ.

ಶಾಸನಗಳು ಇತಿಹಾಸ ರಚನೆಯಲ್ಲಿ ಅತ್ಯಂತ ಮೌಲ್ಯಯುತ, ನಂಬಲರ್ಹ, ಪ್ರಮಾಣಬದ್ಧ, ಮತ್ತು ನೇರ ಆಧಾರಗಳಾಗಿದ್ದು, ಘಟನೆಗಳಿಗೆ ನೇರ ಸಂಬಂಧ ಹೊಂದಿರುವುದರಿಂದ ಹೆಚ್ಚು  ನಂಬಲರ್ಹವಾಗಿವೆ. ಶಾಸನಗಳನ್ನು ಶಿಲೆಗಳು, ಬಂಡೆಗಳು, ಗೋಡೆಗಳು, ಮಣ್ಣಿನಮುದ್ರಿಕೆಗಳು, ಕಬ್ಬಿಣ ಕಂಬಗಳ ಮೇಲೆ ಮತ್ತು ಕೆಲವನ್ನು ತಾಮ್ರಪಟಗಳ ಮೇಲೆ ಕೆತ್ತಲಾಗಿದೆ.

ಭಾರತದಲ್ಲಿ ಈವರೆಗೆ 75,000 ಕ್ಕಿಂತಲೂ ಹೆಚ್ಚಿನ ಶಾಸನಗಳು ಲಭ್ಯವಾಗಿವೆ. ಅವು ಸಂಸ್ಕೃತ, ಪಾಲಿ, ಪ್ರಾಕೃತ, ತಮಿಳು, ತೆಲಗು, ಕನ್ನಡ, ಮುಂತಾದ ಭಾಷೆಗಳಲ್ಲಿ ಬರೆಯಲ್ಪಟ್ಟಿವೆ. ಅವು ವಿವಿಧ ಘಟನೆಗಳು, ಮಾರಾಟ ಪತ್ರಾದೇಶಗಳು, ದಾನಪತ್ರ, ಕಾಲಾನುಕ್ರಮ, ರಾಜರ ದಿಗ್ವಿಜಯ, ಮುಂತಾದವುಗಳನ್ನು ಕುರಿತಾದ ವಿವರಗಳನ್ನು ಹೊಂದಿರುತ್ತವೆ. ಶಾಸನಗಳ ಅಧ್ಯಯನವನ್ನು ‘ಶಾಸನಶಾಸ್ತ್ರ’ ಎನ್ನುತ್ತಾರೆ.

ಸಿಂಧೂ ನಾಗರಿಕತೆಯ ಮುದ್ರಿಕೆಗಳ ಮೇಲಿರುವ ಲಿಪಿಯನ್ನು ಸರ್ವಸಮ್ಮತವಾಗುವಂತೆ ಇನ್ನೂ ಓದಲಾಗಿಲ್ಲ. ಆದ್ದರಿಂದ ಅಶೋಕನ ಶಾಸನಗಳನ್ನು ಪ್ರಾಚೀನತಮವೆಂದು ಪರಿಗಣಿಸಲಾಗಿದೆ. ಒರಿಸ್ಸಾ ರಾಜ್ಯದ ಹಥಿಗುಂಫಾದಲ್ಲಿರುವ ಖಾರವೇಲ ರಾಜನ ಶಿಲಾಶಾಸನವು ಖಾರವೇಲನ ದಿಗ್ವಿಜಯಗಳ ಬಗ್ಗೆ ವಿವರ ನೀಡುತ್ತದೆ. ಹರಿಸೇನನಿಂದ ರಚಿತವಾದ ಅಲಹಾಬಾದ್ ಸ್ತಂಭ ಶಾಸನವು ಸಮುದ್ರಗುಪ್ತನ ಸಾಧನೆಗಳ ವಿವರಗಳನ್ನು ನೀಡುತ್ತದೆ. ರವಿಕೀರ್ತಿ ರಚಿಸಿದ ಐಹೊಳೆ ಶಾಸನ ಮತ್ತು ಕಾಕುತ್ಸವರ್ಮನ ಹಲ್ಮಿಡಿ ಶಾಸನಗಳು ಕರ್ನಾಟಕ ಇತಿಹಾಸದಲ್ಲಿ ತಮ್ಮದೇ ಆದ ಮಹತ್ವ ಹೊಂದಿವೆ.

 2) ನಾಣ್ಯಗಳು:

* ಸಮುದ್ರಗುಪ್ತನು 7 ಪ್ರಕಾರದ ಚಿನ್ನದ ನಾಣ್ಯಗಳನ್ನು ಹೊರಡಿಸಿದ್ದನು. ಅವುಗಳ ಮೇಲಿರುವ ಚಿತ್ರಗಳ ಆಧಾರದ ಮೇಲೆ ಸಮುದ್ರಗುಪ್ತನು ಸಂಗೀತ ಪ್ರಿಯನಾಗಿದ್ದನು ಮತ್ತು ಅಶ್ವಮೇಧ ಯಾಗ ನಡೆಸಿದನೆಂದು ಹೇಳಲಾಗುವುದು.

* ಗೌತಮಿಪುತ್ರ ಶಾತಕರ್ಣಿಯು ನಹಪಾಣನನ್ನು ಸೋಲಿಸಿ-ನಹಪಾಣನ ನಾಣ್ಯಗಳ ಮೇಲಿದ್ದ ಅವನ ಹೆಸರನ್ನು ಅಳಿಸಿಹಾಕಿ ತನ್ನ ಹೆಸರನ್ನು ಟಂಕಿಸಿದ್ದಾನೆ.

* ಬೆಂಗಳೂರಿನಲ್ಲಿ ದೊರಕಿರುವ ರೋಮನ್ ನಾಣ್ಯಗಳಿಂದ- ಈ ಪ್ರದೇಶ 2000 ವರ್ಷಗಳ ಹಿಂದೆಯೇ ರೋಮ್ ಜೊತೆಗೆ ವ್ಯಾಪಾರ ಸಂಪರ್ಕ ಹೊಂದಿತ್ತೆಂದು ತಿಳಿಯುತ್ತದೆ.

ನಾಣ್ಯಗಳು ಕಾಲ, ರಾಜವಂಶ, ಆರ್ಥಿಕ ಸ್ಥಿತಿ, ಧರ್ಮ, ಲಿಪಿ ಮತ್ತು ಭಾಷೆಗಳನ್ನು ತಿಳಿಯಲು ಸಹಾಯ ಮಾಡುತ್ತವೆ. ಅಲ್ಲದೇ ಅಂದಿನ ಜನರ ಲೋಹವಿದ್ಯೆ, ಕಲಾಕೌಶಲ್ಯ, ಬಿರುದುಗಳು, ವ್ಯಾಪಾರ ಸಂಬಂಧಗಳು, ರಾಜ್ಯದ ಮೇರೆಗಳ ಬಗ್ಗೆಯೂ ಮಾಹಿತಿ ನೀಡುತ್ತವೆ. ಗುಪ್ತ, ಶಾತವಾಹನ, ಯಾದವ, ವಿಜಯನಗರ, ಮುಂತಾದ ರಾಜವಂಶಗಳ ನಾಣ್ಯಗಳು ಉಲ್ಲೇಖನೀಯವಾಗಿವೆ. ಒಂದು ದೇಶದಲ್ಲಿ ದೊರೆಯುವ ಇನ್ನೊಂದು ದೇಶಗಳ ನಾಣ್ಯಗಳು ಆ ಎರಡು ದೇಶಗಳ ನಡುವಿನ ವಾಣಿಜ್ಯ ಸಂಬಂಧವನ್ನು ತಿಳಿಸುತ್ತವೆ. ಭಾರತದ ನಾಣ್ಯಗಳು ಚಿನ್ನ, ಬೆಳ್ಳಿ, ತಾಮ್ರ, ಮುಂತಾದ ಲೋಹಗಳಿಂದ ತಯಾರಿಸಿದವುಗಳಾಗಿವೆ.

 3) ಸ್ಮಾರಕಗಳು:

ಸ್ಮಾರಕಗಳು ಚರಿತ್ರೆಯನ್ನು ಬರೆಯಲು ಪ್ರಮುಖ ಸಾಕ್ಷಿಗಳಾಗಿವೆ. ಉದಾ-ಅರಮನೆಗಳು, ದೇವಾಲಯಗಳು, ಕೋಟೆ-ಕೊತ್ತಲಗಳು, ಸ್ತಂಭಗಳು.

* ಮೆಹರೂಲಿಯ- ಉಕ್ಕಿನ ಸ್ತಂಭ, ವಿಜಯಪುರದ-ಗೋಲಗುಮ್ಮಟದ ಪಿಸುಮಾತಿನ ಮೊಗಸಾಲೆಗಳು, ಷಹಜಹಾನನ-ತಾಜ್‌ಮಹಲ್, ರಾಣಕುಂಭನ ವಿಜಯವನ್ನು ಸಾರುವ-ಚಿತ್ತೋಡಘಡದ ವಿಜಯಸ್ತಂಭ.

* ಅಜಂತ, ಎಲ್ಲೋರ, ಎಲಿಫೆಂಟಾ ಗುಹೆಗಳ ಭಿತ್ತಿಚಿತ್ರಗಳು ಮತ್ತು ಉಬ್ಬುಶಿಲ್ಪಗಳು ಮುಂತಾದುವುಗಳು ಅಂದಿನ ಕಾಲದ ಕಲಾನೈಪುಣ್ಯತೆ ಮತ್ತು ತಾಂತ್ರಿಕ ಕೌಶಲ್ಯತೆಗೆ ಸಾಕ್ಷಿಯಾಗಿವೆ. * ಕರ್ನಾಟಕದ ಐಹೊಳೆ ಮತ್ತು ಪಟ್ಟದಕಲ್ಲಿನ ದೇವಾಲಯಗಳು ಭಾರತೀಯ ದೇವಾಲಯಗಳ ವಾಸ್ತುಶಿಲ್ಪದ ವಿಕಸನ ಕ್ರಮವನ್ನು ಪರಿಚಯಿಸುತ್ತವೆ. * ನಳಂದದಲ್ಲಿರುವ ಸ್ಮಾರಕಗಳು ಮತ್ತು ಬೀದರ್‌ನಲ್ಲಿ ಗವಾನ್ ಕಟ್ಟಿಸಿದ ಮದರಸ ವಾಸ್ತುಶಿಲ್ಪಗಳು ಅಂದಿನ ಕಾಲದ ಶೈಕ್ಷಣಿಕ ಮಹತ್ವವನ್ನು ಸಾರುತ್ತವೆ. * ಶ್ರೀರಂಗಪಟ್ಟಣದ ಕೋಟೆಯು-ರಕ್ಷಣಾ ತಂತ್ರಜ್ಞಾನದ ಕೌಶಲ್ಯಕ್ಕೆ ಸಾಕ್ಷಿಯಾಗಿದೆ.

ಕೋಟೆಗಳು, ಅರಮನೆಗಳು, ಗುಹೆಗಳು, ಗುಡಿಗಳು, ಬಸದಿಗಳು, ಮೂರ್ತಿಗಳು, ಸ್ತೂಪಗಳು, ಮುಂತಾದವು ಸ್ಮಾರಕಗಳಿಗೆ ಉದಾಹರಣೆಗಳಾಗಿವೆ. ಅಜಂತಾ, ಎಲ್ಲೋರಾ, ಖಜುರಾಹೋದಲ್ಲಿನ ಗುಹೆಗಳು, ಕೋನಾರ್ಕ್, ಬೇಲೂರು, ಹಳೇಬೀಡು, ಹಂಪಿ ಮುಂತಾದ ಸ್ಥಳಗಳಲ್ಲಿನ ಗುಡಿಗಳು, ವಿವಿಧ ಸ್ಥಳಗಳಲ್ಲಿ ದೊರೆತಿರುವ ಬುದ್ಧ, ಗೊಮ್ಮಟೇಶನ ಮೂರ್ತಿ ಮುಂತಾದವುಗಳು ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತವೆ.

 4) ಇತರೆ ಅವಶೇಷಗಳು:

ಉತ್ಖನನದ ಸಂದರ್ಭದಲ್ಲಿ ದೊರೆಯುವ-ಮಡಕೆಚೂರು, ಮಣಿ, ಮುದ್ರೆ, ಲೋಹದ ತುಣುಕು ಮೊದಲಾದ ಅವಶೇಷಗಳ ಸಹಾಯದಿಂದ ಅಂದಿನ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಜನಜೀವನ ಮಾತ್ರವಲ್ಲ; ವ್ಯಾಪಾರ ವ್ಯವಹಾರ, ಆಹಾರ ಪದ್ಧತಿ ಮೊದಲಾದವುಗಳನ್ನು ಅರ್ಥಮಾಡಿಕೊಳ್ಳಬಹುದು. * ಉತ್ಖನನದಲ್ಲಿ ದೊರೆಯುವ-ಸತ್ತಪ್ರಾಣಿ, ಪಕ್ಷಿ ಮತ್ತು ಮರಗಿಡಗಳಂತಹ ಜೈವಿಕ ಅವಶೇಷಗಳನ್ನು ಇಂಗಾಲ-14ರ(ಕಾರ್ಬನ್-14) ವಿಧಾನಕ್ಕೆ ಒಳಪಡಿಸುವ ಮೂಲಕ ಅವುಗಳ ಕಾಲವನ್ನು ನಿಷ್ಕರ್ಷೆ ಮಾಡುತ್ತಾರೆ. * ಕಲಬುರಗಿ ಜಿಲ್ಲೆಯ ಸನ್ನತಿ ಮತ್ತು ದೊಡ್ಡಬಳ್ಳಾಪುರ ಸಮೀಪ ರಾಜಘಟ್ಟದಲ್ಲಿ ಬೌದ್ಧ ಸ್ತೂಪಗಳು-ಉತ್ಖನನದಿಂದ ಬೆಳಕಿಗೆ ಬಂದವು. * ತಮಿಳುನಾಡಿನ ಅರಿಕಮೇಡು ಮತ್ತು ಪಟ್ಟಣಂ ಎಂಬಲ್ಲಿ ನಡೆದ ಉತ್ಖನನದಿಂದ ರೋಮ್ ಮತ್ತು ದಕ್ಷಿಣ ಭಾರತದ ನಡುವಿನ ವ್ಯಾಪಾರ ಸಂಬಂಧಗಳ ಬಗೆಗೆ ವಿಪುಲ ಸಾಕ್ಷಿಗಳು ದೊರೆತಿವೆ. ಹೀಗೆ ಉತ್ಖನನದ ಅವಶೇಷಗಳು ಕಾಲಾನಂತರದಲ್ಲಿ ಅದೃಶ್ಯಗೊಂಡ ಸಂಗತಿಗಳನ್ನು ತಿಳಿಸಿಕೊಡುತ್ತವೆ.

 ವರ್ಣಚಿತ್ರಗಳು:

ವಿವಿಧ ಕಾಲಗಳ ವರ್ಣಚಿತ್ರಗಳು ನಮಗೆ ಅಂದಿನ ಕಾಲದ ಸಾಮಾಜಿಕ, ಸಾಂಸ್ಕೃತಿಕ, ಮತ್ತು ಧಾರ್ಮಿಕ ವಿಷಯಗಳನ್ನು ಕಣ್ಣಿಗೆ ಕಟ್ಟುವಂತೆ ತಿಳಿಸುತ್ತವೆ. ಉದಾಹರಣೆಗೆ ಅಜಂತಾ ಗುಹೆಗಳಲ್ಲಿರುವ ಚಿತ್ರಗಳು, ಆಳುವ ವರ್ಗ, ನೃತ್ಯ, ಉಡುಗೆಗಳು, ಸಾರ್ವಜನಿಕ ಮನರಂಜನಾ ಸಮಾವೇಶ, ಕೇಶಾಲಂಕಾರ, ಉತ್ಸವಗಳು, ಮುಂತಾದವುಗಳನ್ನು ತೋರ್ಪಡಿಸುತ್ತವೆ. ಉದಾಹರಣೆಗೆ ಅಜಂತಾ ಗುಹೆಯಲ್ಲಿ ಎರಡನೇ ಪುಲಿಕೇಶಿಯು ಎರಡನೇ ಖುಸ್ರೋವಿನ ದೂತನನ್ನು ಸ್ವಾಗತಿಸುವ ಚಿತ್ರವಿದೆ.

 

ನಿಮಗಿದು ತಿಳಿದಿರಲಿ:

C-14 ವಿಧಾನ/Radio Active Carbon/ವಿಕೀರಣಶೀಲ ಇಂಗಾಲ ವಿಧಾನ:

* ಇದು ಕಾಲನಿಷ್ಕರ್ಷೆಯ ಒಂದು ವೈಜ್ಞಾನಿಕ ವಿಧಾನವಾಗಿದೆ. * ಈ ವಿಧಾನಕ್ಕೆ ಒಳಪಡುವ ಅವಶೇಷಗಳೆಂದರೆ- ಮರ, ಗಿಡ, ಪ್ರಾಣಿ, ಪಕ್ಷಿ ಇತ್ಯಾದಿಗಳ ಜೈವಿಕ ಪಳೆಯುಳಿಕೆಗಳು * ಪ್ರತಿಯೊಂದು ಜೀವಿಯಲ್ಲಿಯೂ ಇಂಗಾಲ-12 ಮತ್ತು ಇಂಗಾಲ-14 ಸಮ ಪ್ರಮಾಣದಲ್ಲಿ ಇರುತ್ತವೆ. * ಜೀವಿಯು ಸತ್ತನಂತರವೂ ಇಂಗಾಲ-12 ಅದೇ ಪ್ರಮಾಣದಲ್ಲಿ ಇದ್ದರೆ, ಇಂಗಾಲ-14 ಕ್ರಮೇಣ ಕ್ಷೀಣಿಸುತ್ತಿರುತ್ತದೆ. * ಇಂಗಾಲ-14 ಇದು 5700 ವರ್ಷಗಳಿಗೆ ತನ್ನ ಅರ್ಧ ಪ್ರಮಾಣದಷ್ಟು ಕ್ಷೀಣವಾಗುತ್ತದೆ. * ಇಂಗಾಲ-12 ಮತ್ತು 14ರ ನಡುವಿನ ವ್ಯತ್ಯಾಸದ ಪ್ರಮಾಣವನ್ನು ಪ್ರಯೋಗಗಳ ಮೂಲಕ ಗುರುತಿಸಿದರೆ ಪಳೆಯುಳಿಕೆಯು ಎಷ್ಟು ವರ್ಷಗಳ ಹಳೆಯದೆಂದು ಲೆಕ್ಕಾಚಾರಮಾಡಬಹುದು.

* ಈ ವಿಧಾನದ ಮೂಲಕ 10,000 ವರ್ಷಗಳ ಹಿಂದಿನವರೆಗಿನ ಪಳೆಯುಳಿಕೆಗಳ ಕಾಲವನ್ನು ಗುರುತಿಸಬಹುದು.

(ಮುಂದುವರೆಯುವುದು…..)


Post a Comment

0 Comments