● ಸಂಸ್ಕೃತ ಸಂಧಿಗಳು - FDA SDA TET Police ಪರೀಕ್ಷೆಗಳಿಗಾಗಿ

ಕನ್ನಡ ವ್ಯಾಕರಣ,  ಸಂಸ್ಕೃತ ಸಂಧಿಗಳು, ಸವರ್ಣ ದೀರ್ಘ ಸಂಧಿ, ಗುಣಸಂಧಿ, ವೃದ್ಧಿಸಂಧಿ, ಯಣ್ ಸಂಧಿ, ಜಶ್ತ್ವ ಸಂಧಿ, ಶ್ಚುತ್ವ ಸಂಧಿ, ಅನುನಾಸಿಕ ಸಂಧಿ, ಪ್ರಕೃತಿಭಾವ, Kannada Grammar, Sandhigalu

ಮಕ್ಕಳು ಚೆನ್ನಾಗಿ ವಿದ್ಯಾಭ್ಯಾಸ ಮಾಡಬೇಕು. ಸೂರ್ಯೋದಯಕ್ಕೆ ಮುನ್ನ ಎದ್ದು ಅಭ್ಯಾಸ ಮಾಡುವುದು ಒಳ್ಳೆಯದು. ಸೂರ್ಯ ನಮಗೆ ಹತ್ತಿರದ ಏಕೈಕ ನಕ್ಷತ್ರ. ಸೂರ್ಯನಿಂದ ಅತ್ಯಂತ ಪ್ರಖರವಾದ ಬೆಳಕು ಭೂಮಿಗೆ ದೊರೆಯುತ್ತದೆ. ಸೂರ್ಯ ದಿಗಂತದಲ್ಲಿದ್ದಂತೆ ಕಾಣುತ್ತಾನೆ. ಸೂರ್ಯನೇ ಜಗಜ್ಜ್ಯೋತಿ, ಸೂರ್ಯನೇ ಚಿನ್ಮಯ.

ಮೇಲಿನ ವಾಕ್ಯವೃಂದದಲ್ಲಿ ಹಲವು ಸಂಸ್ಕೃತ ಪದಗಳಿವೆ. ಈ ಪದಗಳು ಕನ್ನಡ ಭಾಷೆಯಲ್ಲಿ ಹಾಸುಹೊಕ್ಕಾಗಿ ಸೇರಿವೆ. ಕೆಲವು ಪದಗಳು ಸಂಧಿಯಾಗಿ ಪ್ರಯೋಗವಾಗಿವೆ. ಇಲ್ಲಿಯ ಸಂಧಿಕಾರ್ಯ ಸಂಸ್ಕೃತ ಭಾಷೆಯ ನಿಯಮಗಳ ಪ್ರಕಾರ ನಡೆದಿದೆ. ಇಂಥ ಪದಗಳ ಸೇರಿಕೆಯನ್ನು ಸಂಸ್ಕೃತ ಸಂಧಿಗಳು ಎಂದು ಕರೆಯುತ್ತೇವೆ.

* ಕೆಳಗಿ ವಾಕ್ಯಗಳನ್ನು ಗಮನಿಸಿ:
- ರಾಮಾಯಣ ಮಹೋನ್ನತ ಗ್ರಂಥ.
- ಸೂರ್ಯೋದಯ ದೃಶ್ಯ ಅತ್ಯಂತ ಮನೋಹರವಾಗಿದೆ.
ಮೇಲಿನ ಎರಡು ವಾಕ್ಯಗಳಲ್ಲಿರುವ ರಾಮಾಯಣ, ಮಹೋನ್ನತ, ಗ್ರಂಥ, ಸೂರ್ಯೋದಯ, ದೃಶ್ಯ, ಅತ್ಯಂತ, ಮನೋಹರ - ಎಲ್ಲವೂ ಸಂಸ್ಕೃತ ಪದಗಳು. ಆದರೆ ಕನ್ನಡ ಪದಗಳೆಂದು ಪರಿಗಣಿಸಲ್ಪಟ್ಟಿವೆ. ಹೀಗೆ ಕನ್ನಡ ಭಾಷೆಗೆ ಸಂಸ್ಕೃತ ಪದಗಳು ಸೇರ್ಪಡೆಯಾಗಿವೆ. ಇಂತಹ ಸಂಸ್ಕೃತ ಪದಗಳೇ ಸೇರಿ ಸಂಧಿಯಾದರೆ ಅವುಗಳನ್ನು ಸಂಸ್ಕೃತ ಸಂಧಿ ಎಂದು ಕರೆಯಲಾಗುತ್ತದೆ.

* ಎರಡು ಸ್ವರಗಳ ನಡುವೆ ಸಂಧಿಯಾದರೆ ಅದು - ಸ್ವರಸಂಧಿ.
* ಸ್ವರಕ್ಕೆ ವ್ಯಂಜನ ಅಥವಾ ವ್ಯಂಜನಕ್ಕೆ ವ್ಯಂಜನ ಸೇರಿ ಸಂಧಿಯಾದರೆ ಅದು - ವ್ಯಂಜನಸಂಧಿ.

* ಸಂಸ್ಕೃತ-ಸಂಸ್ಕೃತ ಪದಗಳು ಸೇರಿ ಸಂಧಿಯಾದರೆ ಅಂತಹ ಸಂಧಿಗಳನ್ನು ಸಂಸ್ಕೃತ ಸಂಧಿ ಎಂದು ಕರೆಯುತ್ತೇವೆ. ಕನ್ನಡದಂತೆಯೇ ಸಂಸ್ಕೃತದಲ್ಲೂ – ಸ್ವರ ಸಂಧಿಗಳು & ವ್ಯಂಜನ ಸಂಧಿಗಳು ಇವೆ. ಅವುಗಳ ಬಗ್ಗೆ ತಿಳಿಯೋಣ.

ಸಂಸ್ಕೃತ ಸ್ವರ ಸಂಧಿಗಳು:

1) ಸವರ್ಣದೀರ್ಘ ಸಂಧಿ:
* ಸೂತ್ರ : ಸವರ್ಣಸ್ವರಗಳು ಒಂದರ ಮುಂದೆ ಒಂದು ಸೇರಿ ಸಂಧಿಯಾದಾಗ ಅವೆರಡರ ಸ್ಥಾನದಲ್ಲಿ ಅದೇ ಜಾತಿಯ ದೀರ್ಘಸ್ವರ ಆದೇಶವಾಗಿ ಬಂದರೆ ಅದನ್ನು ಸವರ್ಣ ದೀರ್ಘಸಂಧಿ ಎಂದು ಕರೆಯುವರು.
 ಉದಾ 1: ವಿದ್ಯಾಭ್ಯಾಸ ಮಾಡು.
ವಿದ್ಯಾ + ಅಭ್ಯಾಸ > ವಿದ್ಯಾಭ್ಯಾಸ
(ದ್ + ಯ್ + ಆ + ಅ > ದ್ + ಯ್ + ಆ)
ಇಲ್ಲಿ ಪೂರ್ವಪದದ ಕೊನೆಯಲ್ಲಿರುವ – 'ಆ' ಸ್ವರದ ಮುಂದೆ ಪರಪದದ ಆದಿಯಲ್ಲಿ 'ಅ'- ಸ್ವರ
ಇರುವುದು.
2. ರವಿ + ಇಂದ್ರ > ರವೀಂದ್ರ (ಇ+ಇ=ಈ)
(ವ್ + ಇ + ಇ > ವ್ + ಈ)
ಇಲ್ಲಿ ಎರಡು 'ಇ' ಕಾರಗಳು ಸೇರಿ  'ಈ' ಕಾರವಾಗಿದೆ.
3. ಗುರು + ಉಪದೇಶ > ಗುರೂಪದೇಶ (ಉ+ಉ=ಊ)
(ರ್ + ಉ + ಉ > ರ್ + ಊ)
ಇಲ್ಲಿ ಎರಡು  'ಉ' ಕಾರಗಳು ಸೇರಿ 'ಊ' ಕಾರ ಆಗಿದೆ ಮತ್ತು ಮಹಾತ್ಮ, ಗಿರೀಶ, ಸುರಾಸುರ, ವಧೂಪೇತ ಇತ್ಯಾದಿ.

ಮೇಲಿನ ಪದಗಳಲ್ಲಿರುವಂತೆ ರ್ವಪದದ ಅಂತ್ಯಸ್ವರ ಮತ್ತು ಉತ್ತರ ಪದದ ಆರಂಭದ ಸ್ವರ ಒಂದೇ ರೀತಿಯ ವರ್ಣವಾಗಿದ್ದು ಸಂಧಿಕಾರ್ಯ ನಡೆಯುವಾಗ ಅದೇ ಸ್ವರದ ದೀರ್ಘಸ್ವರವು ಆದೇಶವಾಗಿರುವುದು ಕಂಡುಬರುತ್ತದೆ. ಸಂಧಿಕಾರ್ಯ ನಡೆಯುವಾಗ ಒಂದೇ ರೀತಿಯ ಸ್ವರಾಕ್ಷರಗಳು ಪರಸ್ಪರ ಸೇರಿ ದೀರ್ಘಸ್ವರ ಆದೇಶವಾದರೆ ಅಂತಹ ಸಂಧಿಯನ್ನು ಸವರ್ಣದೀರ್ಘ ಸಂಧಿ ಎಂದು ಕರೆಯುತ್ತೇವೆ.
* ಎರಡೂ ಸ್ವರಗಳು ಒಂದೇ ಸ್ಥಾನದಲ್ಲಿ ಹುಟ್ಟುವುದರಿಂದ ಇವು ಸವರ್ಣಗಳು. ಈ ಸವರ್ಣ ಸ್ವರಗಳು ಸಂಧಿಯಾದಾಗ ದೀರ್ಘಸ್ವರವಾಗಿ ಪರಿವರ್ತನೆಯಾಗುತ್ತವೆ. ಹಾಗಾಗಿ ಇದನ್ನು ಸವರ್ಣ ದೀರ್ಘ ಸಂಧಿ ಎಂದು ಕರೆಯಲಾಗಿದೆ. (ಅ, ಆ; ಇ, ಈ, ಉ, ಊ - ಇವು ಸವರ್ಣ ಸ್ವರಗಳು)


2) ಗುಣಸಂಧಿ:
* ಸೂತ್ರ : ಅ, ಆ ಕಾರಗಳಿಗೆ ಇ, ಈ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ 'ಏ' ಕಾರವೂ ಉ, ಊ ಕಾರಗಳು ಪರವಾದರೆ 'ಓ' ಕಾರವೂ, 'ಋ' ಕಾರ ಪರವಾದರೆ 'ಅರ್' ಕಾರವೂ ಆದೇಶವಾಗಿ ಬಂದರೆ ಅದು ಗುಣಸಂಧಿ.

* 'ಅ' ಅಥವಾ 'ಆ' ಎಂಬ ಸ್ವರಗಳಿಗೆ 'ಇ' ಅಥವಾ 'ಈ' ಎಂಬ ಸ್ವರ ಸೇರಿದಾಗ 'ಏ'ಕಾರವೂ, 'ಉ' ಅಥವಾ 'ಊ' ಸ್ವರ ಸೇರಿದಾಗ 'ಓ' ಕಾರವೂ, 'ಋ' ಎಂಬ ಸ್ವರವು ಸೇರಿದಾಗ 'ಅರ್' ಕಾರವೂ ಆದೇಶವಾಗಿ ಬರುವುದನ್ನು ಗುಣಸಂಧಿ ಎಂದು ಕರೆಯುತ್ತೇವೆ.
ಉದಾಹರಣೆಗಳು:
1. ಸೂರ್ಯ + ಉದಯ > ಸೂರ್ಯೋದಯ
(ರ್ + ಯ್ + ಅ + ಉ > ರ್ + ಯ್ + ಓ)
ಇಲ್ಲಿ ಪೂರ್ವಪದದ ಅಂತ್ಯದಲ್ಲಿರುವ 'ಅ' ಕಾರಕ್ಕೆ ಪರಪದದ ಆದಿಯಲ್ಲಿರುವ 'ಉ' ಕಾರ ಸೇರಿ 'ಓ' ಕಾರ ಆದೇಶವಾಗಿ ಬಂದಿದೆ.
2. ಮಹಾ + ಋಷಿ > ಮಹರ್ಷಿ(ಆ+ಋ=ಅರ್)
(ಹ್ + ಆ + ಋ > ಹ್ + ಅರ್)
ಇಲ್ಲಿ ಪೂರ್ವಪದದ ಅಂತ್ಯದಲ್ಲಿರುವ 'ಆ' ಕಾರಕ್ಕೆ ಪರಪದದ ಆದಿಯಲ್ಲಿರುವ 'ಋ' ಕಾರ ಸೇರಿ 'ಅರ್' ಕಾರ ಆದೇಶವಾಗಿ ಬಂದಿದೆ.

3) ವೃದ್ಧಿ ಸಂಧಿ :
* ಸೂತ್ರ : ಅ ಆ ಕಾರಗಳಿಗೆ ಏ ಐ ಕಾರಗಳು ಪರವಾದಾಗ ಅವೆರಡರ ಸ್ಥಾನದಲ್ಲಿ ಐ ಕಾರವೂ, ಓ ಔ ಕಾರಗಳು ಪರವಾದಾಗ ಔ ಕಾರವೂ ಆದೇಶವಾಗಿ ಬಂದರೆ (ಐ, ಔ ಕಾರಗಳು ಆದೇಶವಾಗಿ ಬಂದಾಗ) ಅದೇ ವೃದ್ಧಿಸಂಧಿ.

* ಅ, ಆ ಕಾರಗಳ ಮುಂದೆ ಏ, ಐ ಕಾರಗಳು ಬಂದರೆ ಅವೆರಡರ ಸ್ಥಾನದಲ್ಲಿ 'ಐ' ಕಾರವೂ ಓ, ಔ ಕಾರಗಳು ಬಂದರೆ ಅವೆರಡರ ಸ್ಥಾನದಲ್ಲಿ ಔ ಕಾರವೂ ಆದೇಶವಾಗಿ ಬರುವುದು. ಇದಕ್ಕೆ ವೃದ್ಧಿಸಂಧಿ ಎಂದು ಹೆಸರು.
ಉದಾಹರಣೆಗಳು:
1) ಏಕ + ಏಕ > ಏಕೈಕ(ಅ+ಏ=ಐ)
(ಕ್ + ಅ + ಏ > ಕ್ + ಐ)
ಇಲ್ಲಿ ಪೂರ್ವಪದದ ಅಂತ್ಯದಲ್ಲಿರುವ ಅ ಕಾರಕ್ಕೆ ಪರಪದದ ಆದಿಯಲ್ಲಿರುವ ಏ ಕಾರವು ಪರವಾಗಿ ಸಂಧಿಯಾದಾಗ ಐ ಕಾರವು ಏಕಾದೇಶವಾಗಿ ಬಂದಿದೆ.
2. ವನ + ಓಷಧ > ವನೌಷಧ ಅ+ಓ=ಔ)
 (ನ್ + ಅ + ಓ > ನ್ + ಔ)
ಇಲ್ಲಿ ಪೂರ್ವಪದದ ಅಂತ್ಯದಲ್ಲಿರುವ ಅ ಕಾರಕ್ಕೆ ಪರಪದದ ಆದಿಯಲ್ಲಿರುವ ಓ ಕಾರವು ಪರವಾಗಿ ಸಂಧಿಯಾದಾಗ ಔ ಕಾರವು ಏಕಾದೇಶವಾಗಿ ಬಂದಿದೆ.

4) ಯಣ್ ಸಂಧಿ:
* ಸಂಸ್ಕೃತ ವ್ಯಾಕರಣದಲ್ಲಿ ಕೆಲವು ಸಂಜ್ಞೆಗಳನ್ನು ಮಾಡಿಕೊಳ್ಳಲಾಗಿದೆ. ಅವುಗಳಲ್ಲಿ ಯಣ್ ಎಂಬ ಸಂಜ್ಞೆಯೂ ಒಂದು. "ಯ್ ರ್ ಲ್ ವ್" ಎಂಬ 4 ವ್ಯಂಜನಗಳನ್ನು ಯಣ್ ಅಕ್ಷರಗಳೆಂದು ಗುರುತಿಸಲಾಗಿದೆ. ಸಂಧಿಯಾಗುವಾಗ ಯಣ್ ಅಕ್ಷರಗಳಲ್ಲಿ ಯಾವುದಾದರೂ ಒಂದು ಅಕ್ಷರ ಆದೇಶವಾಗಿ ಬಂದರೆ ಅದೇ ಯಣ್ ಸಂಧಿ.

* ಸೂತ್ರ : ಇ ಈ ಕಾರಗಳಿಗೆ ಯ್ ಕಾರವೂ, ಉ ಊ ಕಾರಗಳಿಗೆ ವ್ ಕಾರವೂ, ಋ ಕಾರಕ್ಕೆ
ಅರ್ ಕಾರವೂ ಆದೇಶವಾಗಿ ಬಂದರೆ ಅದು ಯಣ್ ಸಂಧಿ.

* ಇ, ಈ , ಉ, ಊ, ಋ ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದರೆ, ಇ, ಈ ಕಾರಗಳಿಗೆ ಯ್ ಕಾರವೂ ಉ, ಊ ಕಾರಗಳಿಗೆ ವ್ ಕಾರವೂ, ಋ ಕಾರಕ್ಕೆ ಅರ್ ಕಾರವೂ ಆದೇಶವಾಗಿ ಬರುವುದನ್ನು `ಯಣ್ ಸಂಧಿ' ಎಂದು ಕರೆಯುವರು.
ಉದಾಹರಣೆಗಳು:
1: ಅತಿ + ಅಂತ > ಅತ್ಯಂತ
(ತ್ + ಇ + ಅಂ > ತ್ + ಯ್ + ಅಂ )
ಇಲ್ಲಿ ಪೂರ್ವಪದದ ಅಂತ್ಯದಲ್ಲಿರುವ ಇ ಕಾರಕ್ಕೆ ಪರಪದದ ಆದಿಯಲ್ಲಿರುವ ಅ ಕಾರ ಸೇರಿ ಸಂಧಿಯಾದಾಗ ಇ ಕಾರದ ಬದಲಿಗೆ ಯ್ ಕಾರ ಆದೇಶವಾಗಿದೆ.
2. ಅಣು + ಅಸ್ತ್ರ > ಅಣ್ವಸ್ತ್ರ
(ಣ್ + ಉ + ಅ > ಣ್ + ಉ + ಅ)
ಇಲ್ಲಿ ಪೂರ್ವಪದದ ಅಂತ್ಯದಲ್ಲಿರುವ ಉ ಕಾರಕ್ಕೆ ಪರಪದದ ಆದಿಯಲ್ಲಿರುವ ಅ ಕಾರ ಸೇರಿ ಸಂಧಿಯಾದಾಗ ಉ ಕಾರದ ಬದಲಿಗೆ ವ್ ಕಾರ ಆದೇಶವಾಗಿದೆ.
3. ಪಿತೃ + ಆರ್ಜಿತ > ಪಿತ್ರಾರ್ಜಿತ(ಋ+ಆ=ರ್)
(ತ್ + ಋ + ಆ > ತ್ + ರ್ + ಆ)
ಇಲ್ಲಿ ಪೂರ್ವಪದದ ಅಂತ್ಯದಲ್ಲಿರುವ ಋ ಕಾರಕ್ಕೆ ಪರಪದದ ಆದಿಯಲ್ಲಿರುವ ಆ ಕಾರ ಸೇರಿ ಸಂಧಿಯಾದಾಗ ಋ ಕಾರದ ಬದಲಿಗೆ ಅರ್ ಕಾರ ಆದೇಶವಾಗಿದೆ.
4. ಇತಿ+ಆದಿ=ಇತ್ಯಾದಿ (ಇ+ಆ=ಯ್)
5. ಗುರು+ಆಜ್ಞೆ=ಗುರ್ವಾಜ್ಞೆ (ಉ+ಆ=ವ್)
6. ಜಾತಿ+ಅತೀತ=ಜಾತ್ಯತೀತ(ಇ+ಅ=ಯ್)

ಸಂಸ್ಕೃತ ವ್ಯಂಜನ ಸಂಧಿಗಳು:

1) ಜಶ್ತ್ವ ಸಂಧಿ:
* ಸೂತ್ರ: ಪೂರ್ವಪದದ ಕೊನೆಯಲ್ಲಿರುವ ವರ್ಗ ಪ್ರಥಮಾಕ್ಷರಕ್ಕೆ ಅಂದರೆ ಕ್ ಚ್ ಟ್ ತ್ ಪ್ ಗಳಿಗೆ ಅದೇ ವರ್ಗದ ತೃತೀಯಾಕ್ಷರಗಳು ಅಂದರೆ ಗ್ ಜ್ ಡ್ ದ್ ಬ್ ಗಳು (ಜಶ್ ಸಂಜ್ಞೇಯ) ಅಕ್ಷರಗಳು) ಆದೇಶವಾಗಿ ಬಂದರೆ ಅದೇ ಜಶ್ತ್ವ ಸಂಧಿ.

* ಸಂಸ್ಕೃತ ವ್ಯಾಕರಣದಲ್ಲಿ ವರ್ಗೀಯ ವ್ಯಂಜನದ ವರ್ಗ ತೃತೀಯಾಕ್ಷರಗಳಾದ ಗ್ ಜ್ ಡ್ ದ್ ಬ್ ಅಕ್ಷರಗಳನ್ನು ಜಶ್ ಎಂಬ ಸಂಜ್ಞೆಯಿಂದ ಕರೆಯಲಾಗಿದೆ. ಈ ಜಶ್ ಅಕ್ಷರಗಳು ಆದೇಶವಾಗಿ ಬರುವ ಸಂಧಿಯೇ ಜಶ್ತ್ವ ಸಂಧಿ.

* ಸಂಧಿಕಾರ್ಯ ನಡೆಯುವಾಗ ಪೂರ್ವ ಪದದ ಅಂತ್ಯದಲ್ಲಿರುವ ಕ, ಚ, ಟ, ತ, ಪ ಗಳಿಗೆ - ಗ, ಜ, ಡ, ದ, ಬ ಗಳು ಆದೇಶವಾಗಿ ಬರುವುದನ್ನು ಜಶ್ತ್ವ ಸಂಧಿ ಎಂದು ಕರೆಯುತ್ತೇವೆ.
 - ಷಣ್ಮುಖನಿಗೆ ಷಡಾನನ ಎಂಬ ಹೆಸರೂ ಇದೆ.
ಉದಾ 1: ಷಟ್ + ಆನನ > ಷಡಾನನ
       ಟ್ + ಆ >     ಡ್ + ಆ
ಇಲ್ಲಿ ಪೂರ್ವಪದದ ಅಂತ್ಯದಲ್ಲಿರುವ ಟ್ ಕಾರಕ್ಕೆ (ವರ್ಗದ ಪ್ರಥಮಾಕ್ಷರಕ್ಕೆ) ಪರಪದದ ಆದಿಯಲ್ಲಿರುವ ಆ ಕಾರ ಪರವಾಗಿ ಸಂಧಿಯಾದಾಗ ಡ್ ಕಾರ (ಅದೇ ವರ್ಗದ ತೃತೀಯಾಕ್ಷರ ಅಂದರೆ ಜಶ್ ಅಕ್ಷರಗಳಲ್ಲಿ ಒಂದು) ಆದೇಶವಾಗಿ ಬಂದಿದೆ.
2. ವಾಕ್+ಈಶ=ವಾಗೀಶ
3. ವಾಕ್+ದಾನ=ವಾಗ್ದಾನ
4. ದಿಕ್+ಅಂತ=ದಿಗಂತ
5. ಬೃಹತ್+ಆಕಾಶ=ಬೃಹದಾಕಾಶ...ಇತ್ಯಾದಿ

2) ಶ್ಚುತ್ವ್ವ ಸಂಧಿ :
* ಶ್ ಚ್ ಜ್ ಝ್ ಞ್ - ಈ ಅಕ್ಷರಗಳನ್ನು ಶ್ಚು ಎಂಬ ಸಂಜ್ಞೆಯಿಂದ ಕರೆಯಲಾಗಿದೆ. ಶ್ಚು ಅಕ್ಷರಗಳು ಆದೇಶವಾಗಿ ಬರುವ ಸಂಧಿಯೇ ಶ್ಚುತ್ವ ಸಂಧಿ.

* ಶ್ಚು ಎಂದರೆ 'ಶ' ಕಾರ ಮತ್ತು 'ಚ' ವರ್ಗಾಕ್ಷರಗಳು. ಈ ಅಕ್ಷರಗಳು ಆದೇಶವಾಗಿ ಬಂದರೆ ಶ್ಚುತ್ವ ಸಂಧಿ. ಸಂಧಿಕಾರ್ಯ ನಡೆಯುವಾಗ ಪೂರ್ವ ಪದದ ಅಂತ್ಯದಲ್ಲಿರುವ ಸ ಕಾರ ಅಥವಾ ತ ವರ್ಗದ ಅಕ್ಷರಗಳಿರುತ್ತವೆ. ಉತ್ತರಪದ ಶ ಕಾರ ಅಥವಾ ಚ ವರ್ಗದ ಅಕ್ಷರಗಳಿಂದ ಆರಂಭವಾಗುತ್ತದೆ. ಸ ಕಾರವಿದ್ದ ಕಡೆ ಶ ಕಾರವೂ, ತ ವರ್ಗದ ಅಕ್ಷರಗಳಿದ್ದ ಕಡೆ ಚ ವರ್ಗದ ಅಕ್ಷರಗಳೂ ಆದೇಶವಾಗಿ ಬರುವುದನ್ನು ಶ್ಚುತ್ವ ಸಂಧಿ ಎಂದು ಕರೆಯುತ್ತೇವೆ.

*ಸೂತ್ರ: ಸ ಕಾರ ತ ವರ್ಗಗಳಿಗೆ ಶ ಕಾರ ಚ ವರ್ಗಗಳು ಅಂದರೆ ಶ್ಚು ಅಕ್ಷರಗಳು ಆದೇಶವಾಗಿ ಬಂದರೆ ಅಂತಹ ಸಂಧಿಗಳೇ ಶ್ಚುತ್ವ ಸಂಧಿ.
ಉದಾಹರಣೆಗಳು:
1: ಮಾನವನಿಗೆ ಮನಶ್ಶುದ್ಧಿ ಇರಬೇಕು
ಈ ವಾಕ್ಯದಲ್ಲಿರುವ ಮನಶ್ಶುದ್ಧಿ ಪದವನ್ನು ಗಮನಿಸಿ
ಮನಸ್ + ಶುದ್ಧಿ > ಮನಶ್ಶುದ್ಧಿ
ಸ್ + ಶ್ + ಉ > ಶ್ + ಶ್ + ಉ
ಇಲ್ಲಿ ಪೂರ್ವಪದದ ಅಂತ್ಯದಲ್ಲಿರುವ ಸ ಕಾರಕ್ಕೆ ಪರಪದದ ಆದಿಯಲ್ಲಿರುವ ಶ ಕಾರ ಪರವಾಗಿ ಸಂಧಿಯಾದಾಗ ಪೂರ್ವಪದದ ಅಂತ್ಯದ ಸ ಕಾರಕ್ಕೆ ಶ ಕಾರ ಆದೇಶವಾಗಿ ಬಂದಿರುವುದು.
2. ಯಶಸ್+ಚಂದ್ರಿಕೆ=ಯಶಶ್ಚಂದ್ರಿಕೆ
3. ಸತ್+ಚಿತ್ರ=ಸಚ್ಚಿತ್ರ... ಇತ್ಯಾದಿ.

3) ಅನುನಾಸಿಕ ಸಂಧಿ:
* ಅನುನಾಸಿಕ ಅಕ್ಷರಗಳಾದ ಙ್ ಞ್ ಣ್ ನ್ ಮ್ ಗಳು ಆದೇಶವಾಗಿ ಬರುವ ಸಂಧಿಯೇ ಅನುನಾಸಿಕ ಸಂಧಿ.
* ಸೂತ್ರ : ವರ್ಗದ ಪ್ರಥಮಾಕ್ಷರಗಳಿಗೆ ಯಾವುದೇ ಅನುನಾಸಿಕ ಅಕ್ಷರಗಳು ಪರವಾದರೂ ಅವುಗಳಿಗೆ ಅಂದರೆ ವರ್ಗದ ಪ್ರಥಮಾಕ್ಷರಗಳಿಗೆ ಅದೇ ವರ್ಗದ ಅನುನಾಸಿಕ ಅಕ್ಷರಗಳು ಆದೇಶವಾಗಿ ಬಂದರೆ ಅದು ಅನುನಾಸಿಕ ಸಂಧಿ.
* ಙ,ಞ,ಣ,ನ,ಮ ಇವು ಅನುನಾಸಿಕ ಅಕ್ಷರಗಳು. ಈ ಅಕ್ಷರಗಳು ಆದೇಶವಾಗಿ ಬಂದರೆ ಅನುನಾಸಿಕ ಸಂಧಿ. ಸಂಧಿಕಾರ್ಯ ನಡೆಯುವಾಗ ಪೂರ್ವ ಪದದ ಅಂತ್ಯದಲ್ಲಿ ಕ್,ಚ್,ಟ್,ತ್,ಪ್ ಅಕ್ಷರಗಳಿರುತ್ತವೆ. ಉತ್ತರಪದ ಅನುನಾಸಿಕ ಅಕ್ಷರಗಳಿಂದ ಆರಂಭವಾಗುತ್ತದೆ.
* ವರ್ಗದ ಕ,ಚ,ಟ,ತ,ಪ ವ್ಯಂಜನಗಳಿಗೆ ಅದೇ ವರ್ಗದ ಅನುನಾಸಿಕ ಅಕ್ಷರಗಳೂ ಆದೇಶವಾಗಿ ಬರುವುದನ್ನು ಅನುನಾಸಿಕ ಸಂಧಿ ಎಂದು ಕರೆಯುತ್ತೇವೆ.
ಉದಾಹರಣೆಗಳು:
1. ವಾಕ್ + ಮಯ > ವಾಙ್ಮಯ
 ಕ್ + ಮ್ + ಅ > ಙ್ + ಮ್ + ಅ
ಇಲ್ಲಿ ಪೂರ್ವಪದದ ಕೊನೆಯ ಅಕ್ಷರವಾದ ಕ ಕಾರಕ್ಕೆ ಪರಪದದ ಆದಿಯಲ್ಲಿರುವ ಮ ಕಾರ ಪರವಾಗಿ ಸಂಧಿಯಾದಾಗ ಕ ಕಾರದ ಬದಲಿಗೆ ಅದೇ ವರ್ಗದ ಅನುನಾಸಿಕ ಅಕ್ಷರ ಙ ಕಾರ ಆದೇಶವಾಗಿ ಬಂದಿದೆ.
2. ಷಟ್+ಮುಖ=ಷಣ್ಮುಖ
3. ಸತ್+ಮಾನ=ಸನ್ಮಾನ ಇತ್ಯಾದಿ.

* ಪ್ರಕೃತಿಭಾವ:
ಕೆಲವು ಸಲ ಸ್ವರಕ್ಕೆ ಸ್ವರವು ಪರವಾದಾಗ ಯಾವುದೇ ರೀತಿಯ ಸಂಧಿ ಕಾರ್ಯವು ನಡೆಯುವುದಿಲ್ಲ. ಇದನ್ನು ಪ್ರಕೃತಿಭಾವ ಎನ್ನುತ್ತೇವೆ.
ಉದಾ: ಅಣ್ಣಾ + ಓಡಿ ಬಾ = ಅಣ್ಣಾ ಓಡಿ ಬಾ.
ಇಲ್ಲಿ ಅಣ್ಣಾ ಮತ್ತು ಓಡಿ ಬಾ ಎಂಬ ಎರಡು ಪದಗಳ ನಡುವೆ ಸಂಧಿಕಾರ್ಯ ನಡೆಯದೆ ಆ ಪದಗಳು ಹಾಗೆಯೇ ಉಳಿದುಕೊಂಡಿವೆ. ಇದೇ ರೀತಿ ಕೆಲವು ಉದಾಹರಣೆಗಳನ್ನು ಗಮನಿಸಿರಿ.
ಕೃಷ್ಣ + ಎಲ್ಲಿದ್ದೀಯಾ = ಕೃಷ್ಣ ಎಲ್ಲಿದ್ದೀಯಾ?
ಅಕ್ಕಾ + ಎಲ್ಲಿರುವೆ = ಅಕ್ಕಾ ಎಲ್ಲಿರುವೆ?
ಆ + ಅಂಗಡಿ = ಆ ಅಂಗಡಿ
ಈ + ಮನೆ = ಈ ಮನೆ

Post a Comment

0 Comments